‘ಹೆಮ್ಮೆಯ’ ಬಿಜೆಪಿ ಕಾರ್ಯಕರ್ತರೊಂದಿಗೆ ‘ವಿಶೇಷ’ ಸೆಲ್ಫಿ ಕ್ಲಿಕ್ಕಿಸಿಕೊಂಡ ಪ್ರಧಾನಿ ಮೋದಿ…!!

ಚೆನ್ನೈ: ಶನಿವಾರದಿಂದ ದಕ್ಷಿಣ ಭಾರತ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುವ ಮುನ್ನ ತೆಳಂಗಾಣ ಹಾಗೂ ತಮಿಳುನಾಡಿಗೆ ಹೋಗಿದ್ದರು. ಶನಿವಾರ ತೆಲಂಗಾಣ ಮತ್ತು ಚೆನ್ನೈಗೆ ಒಂದು ದಿನದ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಸೆಲ್ಫಿ ತೆಗೆದುಕೊಂಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ತಮಿಳುನಾಡು ಭೇಟಿಯ ಕೊನೆಯಲ್ಲಿ ಅವರು ಬಿಜೆಪಿಯ ಕಾರ್ಯಕರ್ತನ ಜತೆ ಸೆಲ್ಫಿ ತೆಗೆಸಿಕೊಂಡಿದ್ದು ವಿಶೇಷ.

ಬಿಜೆಪಿಯ ದಿವ್ಯಾಂಗ ಕಾರ್ಯಕರ್ತರಾದ ತಿರು ಎಸ್. ಮಣಿಕಂಠನ್‌ ಅವರನ್ನು ಪ್ರಧಾನಿ ಮೋದಿ ಭೇಟಿಯಾದರು ಮತ್ತು ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಒಂದು ವಿಶೇಷ ಸೆಲ್ಫಿ… ಚೆನ್ನೈನಲ್ಲಿ ನಾನು ತಿರು ಎಸ್. ಮಣಿಕಂಠನ್‌ ಅವರನ್ನು ಭೇಟಿ ಮಾಡಿದ್ದೇನೆ. ಅವರು ಈರೋಡ್‌ನ ಹೆಮ್ಮೆಯ ಕಾರ್ಯಕರ್ತರು, ಬೂತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ” ಎಂಬ ಕ್ಯಾಪ್ಷನ್‌ ಹಂಚಿಕೊಂಡಿದ್ದಾರೆ. ಅಲ್ಲದೆ, ಇವರು ದಿವ್ಯಾಂಗ ಹೊಂದಿರುವ ವ್ಯಕ್ತಿಯಾಗಿದ್ದರೂ ತನ್ನದೇ ಆದ ಅಂಗಡಿಯನ್ನು ನಡೆಸುತ್ತಾರೆ ಮತ್ತು ಹೆಚ್ಚು ಪ್ರೇರೇಪಿಸುವ ಅಂಶವೆಂದರೆ, ಅವರು ತನ್ನ ದೈನಂದಿನ ಲಾಭದ ಗಣನೀಯ ಭಾಗವನ್ನು ಬಿಜೆಪಿಗೆ ನೀಡುತ್ತಾರೆ” ಎಂದೂ ಟ್ವಿಟ್ಟರ್‌ನಲ್ಲಿ.ಬರೆದುಕೊಂಡಿದ್ದಾರೆ