ಕರಾವಳಿ ಹುಡುಗನ ಕ್ಯಾಮರಾ ಕಣ್ಣುಗಳ ಚಿನ್ನದ ಬೇಟೆ: ಅಮೃತ್ ಬೀಜಾಡಿಯವರ ‘ಥೈಯಂ’ ಛಾಯಾಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ!

ಕುಂದಾಪುರ: ಕರಾವಳಿಯ ಕುಂದಾಪುರದ ಛಾಯಾಗ್ರಾಹಕ ಅಮೃತ್ ಬೀಜಾಡಿಯವರ ‘ಥೈಯಂ’ ಛಾಯಾಚಿತ್ರಕ್ಕೆ ಅಂತರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿಯ ಜೊತೆಗೆ ಚಿನ್ನದ ಪದಕ ಲಭಿಸಿದೆ. ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆದ ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಮೃತ್ ಬೀಜಾಡಿಯ ಕೇರಳದಲ್ಲಿ ಸೆರೆಹಿಡಿದಿದ್ದ ಥೈಯಂ ಛಾಯಾಚಿತ್ರಕ್ಕೆ ಎಫ್ ಎಸ್ ಗೋಲ್ಡ್ ಮೆಡಲ್ ಮತ್ತು ಎಂಟು ಎಕ್ಸೆಪ್ಟನ್ಸ್ ಪ್ರಶಸ್ತಿಗಳು ದೊರಕಿವೆ.

ಫೋಟೋಗ್ರಫಿಯನ್ನು ಹವ್ಯಾಸವಾಗಿ ಆರಂಭಿಸಿದ್ದ ಅಮೃತ್ ತದನಂತರ ಅದನ್ನೇ ವೃತ್ತಿಯಾಗಿ ಬೆಳೆಸಿಕೊಂಡವರು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಛಾಯಾಚಿತ್ರಗಳಿಗಾಗಿ ಈಗಾಗಾಲೇ ಹೆಸರುವಾಸಿಯಾಗಿರುವ ಅಮೃತ್, ಹೊಸತರ ತುಡಿತದಲ್ಲಿ ಸದಾ ಮಗ್ನರಾಗಿರುತ್ತಾರೆ. ಕುಂದಾಪುರದ ಹುಡುಗನ ಚಿನ್ನದ ಬೇಟೆಯು ಸಮಸ್ತ ಕರಾವಳಿಗರಿಗೆ ಸಂತಸವನ್ನುಂಟು ಮಾಡಿದೆ.