ನಾಳೆಯಿಂದ ರಾಜ್ಯಾದ್ಯಂತ ಬಸ್ ಸಂಚಾರಕ್ಕೆ ಅವಕಾಶ: ಸಿಎಂ ಯಡಿಯೂರಪ್ಪ

ನಾಳೆಯಿಂದ ರಾಜ್ಯಾದ್ಯಂತ ಬಸ್ ಸಂಚಾರಕ್ಕೆ ಅವಕಾಶ: ಸಿಎಂ ಯಡಿಯೂರಪ್ಪ
ಬೆಂಗಳೂರು: ರಾಜ್ಯದ ರೆಡ್ ಝೋನ್ ಹಾಗೂ ಕಂಟೇನ್ ಮೆಂಟ್ ಝೋನ್ ಗಳನ್ನು ಹೊರತುಪಡಿಸಿ ಉಳಿದೆಲ್ಲ ಕಡೆ ನಾಳೆ (ಮೇ 19) ಬೆಳಿಗ್ಗೆ 9 ಗಂಟೆಯಿಂದ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಂಟೇನ್ ಮೆಂಟ್ ಜೋನ್ ಹಾಗೂ ಕರ್ನಾಟಕಕ್ಕೆ ಅಂತಾರಾಜ್ಯಗಳ ಬಸ್ ಸಂಚಾರಕ್ಕೆ ಅವಕಾಶವಿಲ್ಲ ಎಂದು ಎಂದರು.
ಖಾಸಗಿ ಬಸ್ ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಒಂದು ಬಸ್ ನಲ್ಲಿ‌ 30 ಜನರ ಪ್ರಯಾಣಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಪ್ರಯಾಣದ ವೇಳೆ ಎಲ್ಲರೂ ಸಾಮಾಜಿಕ ಅಂತರ ಪಾಲಿಸಬೇಕು ಹಾಗೂ ಕಡ್ಡಾಯವಾಗಿ‌ ಮಾಸ್ಕ್ ಧರಿಸಬೇಕು ಹೇಳಿದರು.
ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಇರಲಿದ್ದು, ಯಾವುದೇ ಅಂಗಡಿ ಹಾಗೂ ವಾಹನಗಳ ಸಂಚಾರ ಇರುವುದಿಲ್ಲ ಎಂದು ತಿಳಿಸಿದರು.
ಮೇ 31ರವರೆಗೆ ಈ ಮಾರ್ಗಸೂಚಿ ಜಾರಿಯಲ್ಲಿರಲಿದ್ದು, ಸಂಜೆ 7ರಿಂದ ಬೆಳಿಗ್ಗೆ 7 ಗಂಟೆಯವರೆಗೆ ಕರ್ಪ್ಯೂ ಜಾರಿಯಲ್ಲಿರುತ್ತದೆ ಎಂದು ಹೇಳಿದರು.