ಹಿರಿಯಡಕ: ಬಾವಿಗೆ ಹಾರಿ ಪೆರ್ಡೂರು ನಿವಾಸಿ ಆತ್ಮಹತ್ಯೆ

ಹಿರಿಯಡಕ: ಒಂಟಿತನದಿಂದ ಮಾನಸಿಕವಾಗಿ ಮನನೊಂದ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ‌ ತಾಲೂಕಿನ ಪೆರ್ಡೂರು ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ನಡೆದಿದೆ.

ಪೆರ್ಡೂರು ಗ್ರಾಮದ ಗುಂಡ್ಯಡ್ಕ ನಿವಾಸಿ ಸುಬ್ಬಣ್ಣ ಪ್ರಭು (60) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.‌ ಇವರು ತಾಯಿಯೊಂದಿಗೆ ವಾಸವಾಗಿದ್ದರು. ಹೆಂಡತಿ ಕಾಯಿಲೆಯಿಂದ ಮೃತಪಟ್ಟಿದ್ದು, ಒಬ್ಬನೇ ಮಗ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಕಳೆದ 4 ತಿಂಗಳ ಹಿಂದೆ ಸುಬ್ಬಣ್ಣನ ತಮ್ಮ ಸತೀಶ ಪ್ರಭು ಎಂಬವರು ಬಾವಿಗೆ ಬಿದ್ದು ಮೃತಪಟ್ಟಿದ್ದರು. ಹಿಂದಿನಿಂದಲೂ ಕುಡಿತದ ಚಟ ಹೊಂದಿದ್ದ ಸುಬ್ಬಣ್ಣ ಪ್ರಭು, ಈ ಎಲ್ಲಾ ಕಾರಣಗಳಿಂದ ಮಾನಸಿಕವಾಗಿ ನೊಂದು ವಿಪರೀತ ಮದ್ಯಪಾನ ಮಾಡುತ್ತಿದ್ದರು.

ಒಂಟಿತನದಿಂದ ಮಾನಸಿಕವಾಗಿ ಮನನೊಂದು ಫೆ. 17ರ ಬೆಳಿಗ್ಗೆ 11 ಗಂಟೆಯಿಂದ ಫೆ. 19ರ ಬೆಳಿಗ್ಗೆ 9.30ರ ಮಧ್ಯೆ ತನ್ನ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.