ಪಡುಬಿದ್ರಿ: ಸ್ಕೂಟಿಗೆ ಲಾರಿ ಡಿಕ್ಕಿ; ಸವಾರ ಮೃತ್ಯು

ಪಡುಬಿದ್ರಿ: ಸ್ಕೂಟಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಲಾರಿಯ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ರಾತ್ರಿ ಕಾಪು ಉಚ್ಚಿಲ ಪೇಟೆಯ ಪಣಿಯೂರು ರಸ್ತೆಯ ಡಿವೈಡರ್ ಬಳಿ ರಾ.ಹೆ. 66ರಲ್ಲಿ ಸಂಭವಿಸಿದೆ.

ಮೃತರನ್ನು ಶ್ರೀಧರ್ ಆಚಾರ್ಯ ಎಂದು ಗುರುತಿಸಲಾಗಿದೆ. ಇವರು ಪಡುಬಿದ್ರಿಯಿಂದ ಉಚ್ಚಿಲ ಕಡೆಗೆ ಎನ್.ಹೆಚ್-66 ಏಕಮುಖ ಸಂಚಾರ ರಸ್ತೆಯಲ್ಲಿ ಬಂದು ಉಚ್ಚಿಲ ಪೇಟೆಯಿಂದ ಪಣಿಯೂರು ರಸ್ತೆಗೆ ಹೋಗಲು ಡಿವೈಡರ್ ಹತ್ತಿರ ಬಂದು ನಿಲ್ಲಿಸಿ. ಅಲ್ಲಿಂದ ಉಡುಪಿಯಿಂದ- ಮಂಗಳೂರು ಕಡೆಗೆ ಹೋಗುವ ಏಕಮುಖ ಸಂಚಾರ ರಸ್ತೆಯಲ್ಲಿ ಚಲಿಸಿ ಪಣಿಯೂರು ರಸ್ತೆಗೆ ಹೋಗುತ್ತಿದ್ದರು.

ಈ ವೇಳೆ ಲಾರಿ ಚಾಲಕ ಶಿವರಾಜ್ ಕೊಡೇರಿ ಬೈಂದೂರು ಎಂಬಾತ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಲಾರಿ ಚಲಾಯಿಸಿಕೊಂಡು ಬಂದು ಶ್ರೀಧರ್ ಆಚಾರ್ಯ ಚಲಿಸುತ್ತಿರುವ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಶ್ರೀಧರ್ ಅವರು ಸ್ಕೂಟಿ ಸಮೇತವಾಗಿ ಲಾರಿ ಎದುರಿನ ಬಂಪರಿಗೆ ಸಿಕ್ಕಿಕೊಂಡಿದ್ದು, ಶ್ರೀಧರ್ ಆಚಾರ್ಯ ಲಾರಿಗೆ ಸಿಲುಕಿಕೊಂಡಿದ್ದರು. ಕೂಡಲೇ ಅವರನ್ನು‌ ಹೊರತೆಗೆದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಶ್ರೀಧರ್ ಆಚಾರ್ಯರವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.