ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದಲ್ಲಿರುವ ಸೈಯದ್ ಬಶೀರ್ ಎಂಬವರ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿ ಮೂವರು ಕಾರ್ಮಿಕರು ಸಾವಿಗೀಡಾಗಿದ್ದು, ಸ್ಫೋಟದ ನಂತರ ಪರಾರಿಯಾಗಿದ್ದ ಮಾಲೀಕ ಸೈಯದ್ ಬಶೀರ್ ಅವರನ್ನು ಸುಳ್ಯದಲ್ಲಿ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಯದ್ ಬಶೀರ್ ಎಂಬುವವರಿಗೆ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಪಟಾಕಿ ತಯಾರಿಸಲು ಪರವಾನಗಿ ನೀಡಲಾಗಿತ್ತು. 2011-2012ರಲ್ಲಿ ಪಡೆದ ಅವರ ಪರವಾನಗಿಯನ್ನು 2019 ರಲ್ಲಿ ನವೀಕರಿಸಲಾಗಿದ್ದು, ಮಾರ್ಚ್ 2024 ರವರೆಗೆ ಮಾನ್ಯವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ಸುದ್ದಿ ಸಂಸ್ಥೆ ಎಚ್ಟಿಗೆ ತಿಳಿಸಿದ್ದಾರೆ.
ಉತ್ಪಾದನಾ ಪ್ರಕ್ರಿಯೆಯಲ್ಲಿ ಸ್ಫೋಟದ ಹಿಂದಿನ ಕಾರಣವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಮೊಬೈಲ್ ಫೊರೆನ್ಸಿಕ್ ತಂಡ ಮತ್ತು ಸ್ಫೋಟಕಗಳ ಇಲಾಖೆ ತಂಡವು ಮಾಹಿತಿ ಸಂಗ್ರಹಿಸಲು ಮತ್ತು ದುರಂತ ಘಟನೆಯ ಸುತ್ತಲಿನ ಸಂದರ್ಭಗಳನ್ನು ತನಿಖೆ ಮಾಡಲು ಸ್ಥಳಕ್ಕೆ ತೆರಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಪಟಾಕಿಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ಪಟಾಕಿಗಳನ್ನು ದೇವಾಲಯಗಳು ಮತ್ತು ಧಾರ್ಮಿಕ ಆಚರಣೆಗಳಲ್ಲಿ ಬಳಸಲು ಸರಬರಾಜು ಮಾಡಲಾಗುತ್ತದೆ. ಘಟನೆಯ ಪರಿಣಾಮ ನಾಲ್ಕು ಮನೆಗಳಿಗೆ ಹಾನಿಯಾಗಿದೆ.
ವೇಣೂರು ಪೊಲೀಸರು ಐಪಿಸಿ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವು) ಮತ್ತು ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
 
								 
															





 
															 
															 
															











