ಮಂಗಳೂರು: ಹಿಟ್ ಎಂಡ್ ರನ್ ಪ್ರಕರಣಕ್ಕೆ ಯುವತಿ ಬಲಿ; ನಾಲ್ವರಿಗೆ ಗಾಯ

ಮಂಗಳೂರು: ಮಂಗಳೂರು ನಗರದಲ್ಲಿ ಬುಧವಾರ ಸಂಜೆ ನಡೆದ ಕಾರಿನ ಭೀಕರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಯುವತಿಯೋರ್ವಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದರೆ ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ನಗರದ ಲೇಡಿ ಹಿಲ್-ಮಣ್ಣಗುಡ್ಡ ಮುಖ್ಯ ರಸ್ತೆಯ ಈಜುಕೊಳ ಮುಂಭಾಗದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಮೃತ ಯುವತಿಯನ್ನು ಸುರತ್ಕಲ್ ಬಾಳದ ರೂಪಶ್ರೀ (23) ಎಂದು ಗುರುತ್ತಿಸಲಾಗಿದೆ. ಸ್ವಾತಿ(26) ಹಿತಾನ್ವಿ(16), ಕೃತಿಕಾ(16), ಯತಿಕಾ(12) ಗಂಭೀರ ಗಾಯಗೊಂಡ ಇತರ ನಾಲ್ವರು ಯುವತಿಯರಾಗಿದ್ದು ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬುಧವಾರ ಅಪರಾಹ್ನ ನಾಲ್ಕು ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಹುಂಡೈ ಇಯೋನ್ ಗಾಡಿ ಸಂಖ್ಯೆ KA 19 MD 5676 ನೋಂದಣಿ ಹೊಂದಿದ್ದ ಕಾರು ಮಣ್ಣಗುಡ್ಡ ಕಡೆಯಿಂದ ಲೇಡಿಹಿಲ್ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೊಂದಿಗೆ ಬಂದಿದ್ದು ಎಸ್‌ ಎಲ್ ಶೇಟ್ ಜ್ಯುವೆಲ್ಲರಿ ಬಳಿ ಫುಟ್‌ ಪಾತಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಮೇಲೆ ಹರಿದಿದೆ.

ಅಪಘಾತ ನಡಸಿದ ಬಳಿಕ ಸ್ಥಳದಿಂದ ಕಾರು ಸಮೇತ ಪರಾರಿಯಾಗಿದ್ದ ಚಾಲಕ ಕಮಲೇಶ್ ಬಲದೇವ್ ಕಾರನ್ನು ಹೋಂಡಾ ಶೋ ರೂಂ ಬಳಿ ನಿಲ್ಲಿಸಿ ಮನೆಗೆ ಹೋಗಿದ್ದು, ಬಳಿಕ ತಂದೆ ಹೆಚ್‌ಎಂ ಬಲದೇವ್ ಅವರೊಂದಿಗೆ ಪಶ್ಚಿಮ ಸಂಚಾರಿ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.