ನಿಫಾ ವೈರಸ್ ಭಯ ಬೇಡ, ಎಚ್ಚರವಿರಲಿ: ಡಾ.ವಾಸುದೇವ

ಉಡುಪಿ, ಜೂನ್ 11: ನಿಫಾ ವೈರಸ್ ಕುರಿತಂತೆ ಜಿಲ್ಲೆಯ ಜನತೆ ಯಾವುದೇ ರೀತಿ ಆತಂಕ ಪಡುವ ಅಗತ್ಯ ಇಲ್ಲ. ಜ್ವರ ಅಥವಾ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಅವರು ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿಯ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

ಸಾಮಾನ್ಯವಾಗಿ ಜ್ವರ, ತಲೆನೋವು, ತಲೆ ಸುತ್ತುವಿಕೆ, ದಿಗ್ಬ್ರಮೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವುದು ನಿಫಾ ವೈರಸ್‍ನ ಲಕ್ಷಣಗಳಾಗಿದ್ದು, ಈ ಲಕ್ಷಣಗಳು ಕಂಡು ಬಂದರೆ ಕೂಡಲೆ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಮಾರ್ಗದರ್ಶನ ಪಡೆಯುವಂತೆ ಸಲಹೆ ನೀಡಿದರು. ನಿಫಾ ವೈರಸ್, ಬಾವಲಿ ತಿಂದು ಬಿಟ್ಟ ಹಣ್ಣುಗಳನ್ನು ಸೇವಿಸುವುದರಿಂದ ಅಥವಾ ಆ ಹಣ್ಣನ್ನು ಸೇವಿಸಿದ ಹಂದಿ ಅಥವಾ ಇತರ ಪ್ರಾಣಿಗಳಿಂದ ವೈರಸ್ ಸೋಂಕಿತ ವ್ಯಕ್ತಿಯಿಂದ ವ್ಯಕ್ತಿಗೆ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಬಾವಲಿ ಅಥವಾ ಯಾವುದೇ ಪ್ರಾಣಿ ತಿಂದು ಬಿಟ್ಟಂತಹ ಹಣ್ಣುಗಳನ್ನು ಯಾರೂ ತಿನ್ನದಂತೆ ಸೂಚನೆ ನೀಡಿದರು.

ಕೇರಳದ ಎರ್ನಾಕುಲಂನಲ್ಲಿ ಈಗಾಗಲೇ 2 ನಿಫಾ ವೈರಸ್ ಪತ್ತೆಯಾಗಿರುವ ಪ್ರಕರಣಗಳು ದಾಖಲಾಗಿದ್ದು, ಕೇರಳದಿಂದ ಬರುವಂತಹ ಪ್ರವಾಸಿಗರು, ಚಿಕಿತ್ಸೆಗಾಗಿ ಬರುವವರು, ನರ್ಸಿಂಗ್ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ವೈರಸ್ ಹರಡದಂತೆ ಹಾಗೂ ನಿಫಾ ವೈರಸ್ ಸೋಂಕಿತರಿಂದ ಇತರರಿಗೆ ಹರಡದಂತೆ ತಡೆಗಟ್ಟುವ ಸಲುವಾಗಿ ಕೆಲ ತಿಂಗಳ ಕಾಲ ಈಗಾಗಲೇ ಜಿಲ್ಲೆಯಲ್ಲಿರುವರನ್ನು ವಾಪಸ್ಸು ಹೋಗದಂತೆ ಹಾಗೂ ಅಲ್ಲಿಂದ ಯಾರೂ ಈ ಕಡೆ ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ನಿಫಾ ವೈರಸ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೇ ಹೊರತು ಭಯಪಡಿಸಬಾರದು. ಬಾವಲಿ ತಿಂದ ಹಣ್ಣುಗಳಿಂದ ನಿಫಾ ವೈರಸ್ ಹರಡುತ್ತದೆ ಎಂದ ಮಾತ್ರಕ್ಕೆ ಬಾವಲಿಯನ್ನು ನಾಶ ಮಾಡುವುದು ಸರಿಯಲ್ಲ, ಬಾವಲಿಯನ್ನು ನಾಶ ಮಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ವೈರಾಣು ಜ್ವರವನ್ನು ತಡೆಗಟ್ಟುವ ಬಗ್ಗೆ ಡಾ. ವಾಸುದೇವ ಮಾಹಿತಿ ನೀಡಿ, ಕೈಗಳನ್ನು ಸಂಪೂರ್ಣವಾಗಿ ಶುದ್ದೀಕರಿಸುವುದು ತಡೆಗಟ್ಟುವಿಕೆಯ ಬಹುಮುಖ್ಯ ಕ್ರಮ ಎಂದ ಅವರು, ಬಾವಲಿ ಹೆಚ್ಚಾಗಿರುವ ಪ್ರದೇಶದಲ್ಲಿ ಸಂಗ್ರಹಿಸಿದ ಸೇಂದಿ /ನೀರಾ ಸಂಗ್ರಹಿಸುವಾಗ ಬಾವಲಿ ಕುಡಿದು ನಿಫಾ ವೈರಸ್ ಹರಡುವ ಸಾಧ್ಯತೆ ಇದ್ದು, ಇದನ್ನು ತಡೆಗಟ್ಟಲು ಸೇಂದಿ ಸಂಗ್ರಹಿಸುವಾಗ ಮುನ್ನೆಚ್ಚರಿಕಾ ಕ್ರಮವಾಗಿ ಬಲೆಗಳನ್ನು ಹಾಕಿ ಮುಚ್ಚಬೇಕು. ಹಣ್ಣು ಮತ್ತು ಒಣ ಖರ್ಜೂರವನ್ನು ಸೇವಿಸುವ ಮೊದಲು ಸಂಪೂರ್ಣವಾಗಿ ಶುದ್ಧೀಕರಿಸಬೇಕು. ಅನಾರೋಗ್ಯದ ಹಂದಿಗಳು ಹಾಗೂ ಇತರ ಪ್ರಾಣಿಗಳ ನೇರ ಸಂಪರ್ಕವನ್ನು ತಪ್ಪಿಸುವುದು. ಬಾವಲಿಗಳಿರುವ ಬಾವಿಯ ನೀರನ್ನು ಕುಡಿಯುವಾಗ ಕುದಿಸಿಯೇ ಕುಡಿಯಬೇಕು ಹಾಗೂ ಬಾವಲಿಗಳ ಪ್ರವೇಶವನ್ನು ತಪ್ಪಿಸಲು ತೆರೆದ ಬಾವಿಗೆ ಜಾಲರಿಯನ್ನು ಅಳವಡಿಸುವುದು. ಸೋಂಕಿತ ರೋಗಿಯನ್ನು ನಿರ್ವಹಿಸುವಾಗ ಆಸ್ಪತ್ರೆಯ ಸಿಬ್ಬಂದಿಗಳು ವಿಶೇಷ ಆರೈಕೆ ಬಳಕೆ ಮಡಿಕೊಂಡು ಮಾಸ್ಕ್ ಮತು ಗ್ಲೌಸ್‍ಗಳನ್ನು ಬಳಸುವುದು ತುಂಬಾ ಅವಶ್ಯಕ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಜಿ ರಾಮ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ನಾಗರತ್ನ, ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಕೃಷ್ಣಾನಂದ, ಮತ್ತಿತರರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಕ್ಕಾಗಿ: ಡಾ.ವಾಸುದೇವ್, ಜಿಲ್ಲಾ ಸರ್ವೇಕ್ಷಣಾಧಿಕಾರಿ – 94498 43271