ಕರಕುಶಲ ವಸ್ತುಗಳ ಜತೆ ಮಣ್ಣಿನ ಉತ್ಪನ್ನಗಳಿಗೆ ರಾಷ್ಟ್ರಮಟ್ಟದಲ್ಲಿ ಮಾರುಕಟ್ಟೆ ಒದಗಿಸಲಾಗುವುದು-ಬೇಳೂರು ರಾಘವೇಂದ್ರ ಶೆಟ್ಟಿ

ಉಡುಪಿ: ರಾಜ್ಯದ ಕರಕುಶಲ ವಸ್ತುಗಳು ಮತ್ತು ಗುಡಿಕೈಗಾರಿಕೆಗಳಿಗೆ ಉತ್ತೇಜನ ನೀಡಿ, ಕರಕುಶಲಕರ್ಮಿಗಳಿಗೆ ಸ್ವಾವಲಂಬಿ ಬದುಕು ರೂಪಿಸಲು ಕ್ರಮಕೈಗೊಳ್ಳುವ ಜತೆಗೆ ಮಣ್ಣಿನ ಉತ್ಪನ್ನಗಳಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಾರುಕಟ್ಟೆ ದೊರಕಿಸಿ ಕೊಡಲಾಗುವುದು ಎಂದು ರಾಜ್ಯ ಕರಕುಶಲ ನಿಗಮದ ಅಧ್ಯಕ್ಷರಾದ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಭರವಸೆ ನೀಡಿದ್ದಾರೆ.

ಕುಂದಾಪುರ ತಾಲ್ಲೂಕಿನ ಆಲೂರು ಗ್ರಾಮದ ಗುರುವಂದನಾ ಪಾಟರಿ ಪ್ರೊಡಕ್ಟ್ ಸಂಸ್ಥೆಗೆ ಶನಿವಾರ ಭೇಟಿಕೊಟ್ಟು ಅಲ್ಲಿನ ಮಡಕೆ ತಯಾರಿಕೆ ಮತ್ತು ಮಣ್ಣಿನ ಉತ್ಪನ್ನಗಳ ಕುರಿತು ಮಾಹಿತಿ ಪಡೆದ ಅವರು, ಅಲ್ಲಿನ ಕರಕುಶಲ ವಸ್ತುಗಳನ್ನು ವೀಕ್ಷಿಸಿ ಸಹ ಕೆಲಸಗಾರರ ಜತೆ ಮಡಕೆ ತಯಾರಿಸಿ, ಕೆಲಸಗಾರರಿಗೆ ಪ್ರೋತ್ಸಾಹಿಸಿದರು.

ರಾಜಸ್ಥಾನದ ಮಡಿಕೆಗಳು ಗಟ್ಟಿಯಾಗಿರುತ್ತವೆ. ನಮ್ಮ ಭಾಗದ ಮಡಿಕೆಗಳು ಮೃದುವಾಗಿರುತ್ತವೆ. ಅಲ್ಲಿಯ ತಂತ್ರಜ್ಞಾನ ಬಳಕೆ ಮಾಡಿ ಇಲ್ಲಿಯೂ ಅದೇ ರೀತಿ ಮಡಕೆ ತಯಾರಿಸಲು ಅನುವು ಮಾಡಿಕೊಡಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಹತ್ತು ದಿನಗಳ ಕಾಲ ಕರಕುಶಲ ವಸ್ತುಗಳ ಪ್ರದರ್ಶನ ಮೇಳ ಆಯೋಜಿಸುವ ಯೋಚನೆಯಿದ್ದು, ಮೇಳದಲ್ಲಿ ಬಿದಿರು, ಶಿಲ್ಪಕಲೆ ಮತ್ತು ಮಣ್ಣಿನ ಉತ್ಪನ್ನಗಳು ಪ್ರದರ್ಶನ ಏರ್ಪಡಿಸಿ ಯುವಜನರಲ್ಲಿ ನಶಿಸಿ ಹೋಗುತ್ತಿರುವ ನಮ್ಮ ಸಂಸ್ಕಂತಿಯ ಭಾಗವಾಗಿರುವ ಕರಕುಶಲ ವಸ್ತುಗಳ ಕುರಿತು ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಈಗಾಗಲೇ ಕುಂದಾಪುರದಲ್ಲಿ ಕರಕುಶಲ ವಸ್ತುಗಳ ತಯಾರಿಕಾ ಘಟಕ ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು, ಅದರಲ್ಲಿ ಮಣ್ಣಿನ ಉತ್ಪನ್ನಗಳಿಗಾಗಿ ಪ್ರತ್ಯೇಕ ಒಂದು ಭಾಗ ನಿರ್ಮಿಸಿ, ಉತ್ಪಾದನಾ ಮತ್ತು ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ, ಉಡುಪಿಯಲ್ಲಿ ಹೊಸದಾಗಿ ಪ್ರಾರಂಭಿಸಲು ತೀರ್ಮಾನಿಸಿರುವ ಮಾರುಕಟ್ಟೆಯಲ್ಲಿ ಮಣ್ಣಿನ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ರೈಲುಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಮಣ್ಣಿನ ಉತ್ಪನ್ನಗಳನ್ನು ಬಳಕೆ ಮಾಡಲು ಕೇಂದ್ರಸರ್ಕಾರಕ್ಕೆ ಮನವಿ ಮಾಡುವ ಮೂಲಕ ಕುಂಬಾರರಿಗೆ ಉತ್ತೇಜನ ನೀಡಲು ಕೇಂದ್ರ ಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಯೋಜನೆಯಂತೆ ವಿದೇಶಿ ವಸ್ತು ಬಳಕೆ ನಿಲ್ಲಿಸಿ, ನಮ್ಮ ವಸ್ತುಗಳನ್ನು ಬಳಸಿ, ನಮ್ಮ ಜನರನ್ನು ಬೆಳೆಸಿ ಎಂಬ ಘೋಷಣೆ ಅಡಿಯಲ್ಲಿ ಕರ್ನಾಟಕದಲ್ಲಿ ಕರಕುಶಲ ಕರ್ಮಿಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸಲಾಗವುದು ಎಂದು ಭರವಸೆ ಕೊಟ್ಟರು.