ನಮ್ಮನ್ನು ನಾವು ಬಲ ಪಡಿಸುವ ಬದಲು ಇತರರನ್ನು ಬಲಪಡಿಸಬೇಕು: ವಿವೇಕಾನಂದ ಎಸ್.ಪಂಡಿತ್

ಉಡುಪಿ: ನಮ್ಮನ್ನು ನಾವು ಬಲ ಪಡಿಕೊಳ್ಳುವ ಬದಲು ಇತರರನ್ನು ಬಲಪಡಿಸಿ ಆ ಮೂಲಕ ನಾವು ಬಲ ಪಡೆಯಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿವೇಕಾನಂದ ಎಸ್.ಪಂಡಿತ್ ಹೇಳಿದರು.
ಅವರು ಬುದವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ (ರಿ), ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ಮತ್ತು ವೈಕುಂಠ ಬಾಳಿಗ ಕಾನೂನು ಮಹಾ ವಿದ್ಯಾಲಯ, ಕುಂಜಿಬೆಟ್ಟು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು ಮಹಾ ವಿದ್ಯಾಲಯದಲ್ಲಿ ನಡೆದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಜಾ ಪ್ರಭುತ್ವದ ನಾಲ್ಕು ಅಂಗಗಳಾದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ,
ಪತ್ರಿಕಾ ಮಾಧ್ಯಮ ಒಟ್ಟಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ.
ಬಡತನ ನಿರ್ಮೂಲನೆ, ನಿರುದ್ಯೋಗ, ಲಿಂಗ ತಾರತಮ್ಯ, ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ತಡೆಗಟ್ಟುವ ಉದ್ದೇಶದಿಂದ ಸಾಮಾಜಿಕ ನ್ಯಾಯ ದಿನಾಚರಣೆಯಯನ್ನು ಆಚರಿಸಲಾಗುತ್ತದೆ. ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯಗಳನ್ನು ಎಲ್ಲರಿಗೂ ಸಮಾನವಾಗಿ ಹಂಚಬೇಕು ಎಂದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ಹೆಚ್. ರತ್ನಾಕರ ಶೆಟ್ಟಿ ಮಾತನಾಡಿ, ಯಾವುದೇ
ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಆ ದೇಶದಲ್ಲಿ ಸಾಮಾಜಿಕ ನ್ಯಾಯ ವ್ಯವಸ್ಥಿತವಾಗಿ ಹಂಚಿಕೆಯಾಗಿರಬೇಕು. ಎಲ್ಲಾ ದೇಶಗಳ ಸಂವಿಧಾನದ ಉತ್ತಮ ಅಂಶಗಳನ್ನು ಆಯ್ದು ನಮ್ಮ ದೇಶದ ಸಂವಿಧಾನವನ್ನು ರಚಿಸಲಾಗಿದೆ. ಆದರೆ ಪ್ರಸ್ತುತ ಎಲ್ಲರಿಗೂ ಸಮಾನವಾಗಿ ಸಾಮಾಜಿಕ ನ್ಯಾಯ ಸಿಗುತ್ತಿದೆಯೇ ಎಂಬುದನ್ನು ಯೋಚಿಸಬೇಕಾಗಿದೆ
ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿಯ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜ್ಯೋತಿ ಪಿ.ನಾಯಕ್ ಮಾತನಾಡಿ, ಕೇವಲ ಒಂದು ಕಡೆಯಲ್ಲಿ ಸಾಮಾಜಿಕ ನ್ಯಾಯ ಭದ್ರಪಡಿಸಿದರೆ ಸಾಲದು. ಪ್ರತಿಯೊಂದು ಕಡೆಯಲ್ಲಿಯೂ ಸಾಮಾಜಿಕ ನ್ಯಾಯ ಭದ್ರ ಪಡಿಸುವಂತಾಗಬೇಕು. ನ್ಯಾಯ ಎನ್ನುವುದು ಸಮಾಜ ನೀಡುವ ಜವಾಬ್ದಾರಿಯುತ ಕೊಡುಗೆಯಾಗಿದೆ. ಸಮಾನತೆ ಎನ್ನುವುದು ಆರ್ಥಿಕ, ಉದ್ಯೋಗ, ಶಿಕ್ಷಣ, ಹೆಣ್ಣು ಮಕ್ಕಳ ಅಭದ್ರತೆಯನ್ನು ಭದ್ರಪಡಿಸುವುದಾಗಿದೆ.
ಸಂಕುಚಿತ ಭಾವನೆ ಇರುವವರೆಗೂ ಸಮಾಜದಲ್ಲಿ ಬೆಳವಣಿಗೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಶಿಕ್ಷಣದ ಸೌಲಭ್ಯಗಳ ಕುರಿತು ಅರಿವು ಮೂಡಿಸಬೇಕು ಎಂದರು.
 ಉಡುಪಿ ಕುಂಜಿಬೆಟ್ಟುವಿನ ವೈಕುಂಠ ಬಾಳಿಗ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ಪ್ರೊ. ಪ್ರಕಾಶ್ ಕಣಿವೆ ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದರು. ಶೀತಲ್ ಸ್ನೇಹ ಶೆರಿಲ್ ಸ್ವಾಗತಿಸಿದರು, ಸುಚೇತ ಕಾರ್ಯಕ್ರಮ ನಿರೂಪಿಸಿದರು, ಶ್ರೀ ಲಕ್ಷ್ಮೀ ವಂದಿಸಿದರು.