ಭೂಗತ ಪಾತಕಿ ಬನ್ನಂಜೆ ರಾಜನ ಆಪ್ತ, ಬಾರ್ ಮಾಲೀಕ ಮನೀಶ್ ಶೆಟ್ಟಿಯನ್ನು ಗುಂಡಿಕ್ಕಿ ಹತ್ಯೆ

ಬೆಂಗಳೂರು: ಗುಂಡು ಹಾರಿಸಿ ಬಾರ್ ಮಾಲೀಕರೊಬ್ಬರನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನ ಬ್ರಿಗೇಡ್ ರಸ್ತೆ ಸಮೀಪ ಇಂದು ರಾತ್ರಿ ಸಂಭವಿಸಿದೆ.

ಬೆಂಗಳೂರಿನ ಆರ್‌.ಎಚ್‌.ಪಿ ರಸ್ತೆಯಲ್ಲಿರುವ ಡ್ಯೂಯೆಟ್ ಬಾರ್‌ ಮಾಲೀಕ ಮನೀಶ್ ಶೆಟ್ಟಿ (45) ಎಂಬುವವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ಬಾರ್‌ ಮುಂಭಾಗದಲ್ಲೇ ಮನೀಶ್ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಬ್ಬನ್ ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಚಿಕ್ಕಮಗಳೂರಿನ ಕೊಪ್ಪದ ಮನೀಶ್ ಶೆಟ್ಟಿ, ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಬಾರ್ ತೆರೆದಿದ್ದರು ಎನ್ನಲಾಗಿದೆ. ಈತ ಭೂಗತ ಪಾತಕಿ ಬನ್ನಂಜೆ ರಾಜನ ಆಪ್ತನಾಗಿದ್ದು, 2007ರಲ್ಲಿ ಬೆಂಗಳೂರಿನ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚೆಮ್ಮನೂರು ಜುವೆಲರ್ಸ್ ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಈತ ತನ್ನ ಏಂಟು ಜನ ಸಹಚರರಿಂದ ದರೋಡೆ ಮಾಡಿಸಿದ್ದನು. ಈತನ ವಿರುದ್ದ ಕರ್ನಾಟಕ ಸಹಿತ ಮೂರು ರಾಜ್ಯಗಳಲ್ಲಿ ಪ್ರಕರಣಗಳಿವೆ. ಮಂಗಳೂರಿನಲ್ಲಿ ರೌಡಿಶೀಟರ್ ತೆರೆಯಲಾಗಿದೆ.