ಉಡುಪಿ: ರಾಜಕಾರಣಿಗಳ ಕೈವಾಡದಿಂದ ದಕ್ಷ, ಪರಿಸರವಾದಿ ಯುವ ಅರಣ್ಯಾಧಿಕಾರಿ ಎತ್ತಂಗಡಿ: ಜಿಲ್ಲೆಯ ಅನಿಷ್ಟ ರಾಜಕಾರಣಕ್ಕೆ ಪ್ರಾಮಾಣಿಕ ಅಧಿಕಾರಿ ಬಲಿಪಶು, ಎತ್ತಂಗಡಿಗೆ ಜನವಿರೋಧ!

ಉಡುಪಿ: ಹೆಬ್ರಿ ತಾಲೂಕು ವಲಯ ಅರಣ್ಯಾಧಿಕಾರಿಯಾಗಿರುವ ಮುನಿರಾಜ್, ದಕ್ಷ ಅರಣ್ಯಾಧಿಕಾರಿಯಾಗಿ ಪರಿಸರಕ್ಕೆ ಕಂಟಕವಾಗಿರುವ ಪ್ರಭಾವಿ ರಾಜಕಾರಣಿಗಳನ್ನು ಮಟ್ಟ ಹಾಕಿದ್ದರು. ತಾಲೂಕಿನಲ್ಲಿ ಪ್ರಾಮಾಣಿಕವಾಗಿ, ಪರಿಸರದ ಪರ ಹೋರಾಡಿದ ಈ ಯುವ ಅಧಿಕಾರಿಗೀಗ ಸಿಕ್ಕ ಉಡುಗೊರೆ ಏನು ಗೊತ್ತೆ? ಎತ್ತಗಂಡಿ.

ಹೌದು, ಹೆಬ್ರಿ ತಾಲೂಕಿನಲ್ಲಿ ಆಗಾಗ ನಡೆಯುತ್ತಿದ್ದ ಅಕ್ರಮ ಮರ ಸಾಗಾಟ, ಅರಣ್ಯ ಒತ್ತುವರಿ ,ರಾಜಕಾರಣಿಗಳ, ಉದ್ಯಮಿಗಳ ಕೈವಾಡವಿತ್ತು ಎನನ್ನುವುದು ತಾನು ಅಧಿಕಾರ ವಹಿಸಿದ ಆರೇ ತಿಂಗಳಲ್ಲಿ ಬಯಲು ಮಾಡಿದ ಯುವ ದಕ್ಷ ಅಧಿಕಾರಿಯನ್ನು ಎತ್ತಂಗಡಿ ಮಾಡಿ ಪರಿಸರವಾದಿ ಅರಣ್ಯಾಧಿಕಾರಿಯವರ ಧ್ವನಿಯನ್ನು ಮುರಿಯುವ ಪ್ರಯತ್ನದಲ್ಲಿ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳು ತೊಡಗಿದ್ದಾರೆ, ಸ್ವತಃ ಉಡುಪಿ ಶಾಸಕರೇ ಇದರ ಮುಂದಾಳತ್ವ ವಹಿಸಿದ್ದಾರೆ ಎನ್ನುವುದು ಇಲ್ಲಿನ ಸ್ಥಳೀಯರ ಆರೋಫ.

ದೇಶದಾದ್ಯಂತ ಲಾಕ್ ಡೌನ್ ಹೇರಲಾಗಿದ್ದು ಇದನ್ನೇ ಬಂಡವಾಳವಾಗಿರಿಸಿಕೊಂಡ ಉಡುಪಿ ಜಿಲ್ಲಾ ರಾಜಕಾರಣಿಗಳು ಹೆಬ್ರಿಯ ವಲಯ ಅರಣ್ಯಾಧಿಕಾರಿ ಮುನಿರಾಜ್ ಅವರನ್ನು ಬಂಡಿಪುರ ವನ್ಯಜೀವಿ ವಿಭಾಗಕ್ಕೆ ಎತ್ತಂಗಡಿ ಮಾಡಿದ್ದಾರೆ. ಕರೊನ ಲಾಕ್ಡೌನ್ ಮುಗಿದ ಬಳಿಕ ಈ ಆದೇಶ ಜಾರಿಗೆ ಬರಲಿದೆ ಎಂದು ಉಲ್ಲೇಖಿಸಲಾಗಿದೆ.

ಪ್ರಾಮಾಣಿಕ ಅಧಿಕಾರಿಯ ವಿರುದ್ದ ರಾಜಕೀಯ ಅಸ್ತ್ರ;

ಪೆ.24 ರಂದು ತಾ.ಪಂ ಸಭೆಯಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಿಸುವ ಕುರಿತು ಚರ್ಚೆಯಾದಾಗ,  ಮುನಿರಾಜ್ ಉಡುಪಿ  ಶಾಸಕ ರಘುಪತಿ ಭಟ್ ಗೆ ಮುನಿರಾಜ್ ಅವರು,  “ಕಾನೂನು ಮೀರಿ ಕೆಲಸ ಮಾಡಲು ಸಾಧ್ಯವಿಲ್ಲ” ಎಂದಿದ್ದರು. ಇದು ಶಾಸಕರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಸಂದರ್ಭದಲ್ಲಿ ಉಡುಪಿ ಶಾಸಕ ನೈತಿಕತೆ ಮೀರಿ ಅಧಿಕಾರಿಯನ್ನು ಏಕವಚನದಲ್ಲಿ ಸಂಭೋಧಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. “ಸಂಸ್ಕಾರ ಇಲ್ಲದ ರಾಜಕಾರಣಿಗಳು ಹೇಗಿರುತ್ತಾರೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿತ್ತು.ಅಲ್ಲದೇ ಉಡುಪಿ ಜಿಲ್ಲೆಯ ಮೂರು ತಾಲೂಕಿನ ಶಾಸಕರಿಂದಲೂ ಪ್ರಾಮಾಣಿಕ ಅಧಿಕಾರಿಯ ಧ್ವನಿ ಕುಗ್ಗಿಸುವ ಯತ್ನ ನಡೆದಿದೆ ಎನ್ನಲಾಗಿದೆ.

ಚಾರ ಗ್ರಾಮದ ಮತ್ತು ಬಿಜೆಪಿಯ ಬೇಳಂಜೆ ಜನಪ್ರತಿನಿಧಿ ಅಮೃತ್ ಕುಮಾರ್ ಶೆಟ್ಟಿ, ಯಾರದ್ದೋ ತೋಟದಲ್ಲಿ ಹುದುಗಿಸಿಟ್ಟಿರುವ ಅಕ್ರಮ ಮರಗಳನ್ನು ಶೋಧಿಸಿ, ಸಂಬಂಧಿಸಿದವರ ಮೇಲೆ ಮುನಿರಾಜ್ ಅವರು   ಕ್ರಮ ಕೈಗೊಂಡ ಬಗ್ಗೆ ಮೊದಲ ವರದಿ ಪ್ರಕಟಿಸಿ  ಉಡುಪಿxpress, ದಕ್ಷ ಅರಣ್ಯಾಧಿಕಾರಿಯನ್ನು ಪ್ರಭಾವಿ ಬಿಜೆಪಿ  ರಾಜಕಾರಣಿಗಳು ವರ್ಗಾವಣೆ ಮಾಡುವ ಸಾಧ್ಯತೆ ಇದೆ ಎಂದು ಮೊದಲೇ ಎಚ್ಚರಿಸಿತ್ತು. ಕೆಲವೇ ದಿನಗಳಲ್ಲಿ ಮುನಿರಾಜ್  ಅವರನ್ನು ವರ್ಗಾವಣೆ ಮಾಡುವ ಹುನ್ನಾರವನ್ನು ರಾಜಕಾರಣಿಗಳು ನಡೆಸಿದ್ದರು.

ಅರಣ್ಯ ಇಲಾಖೆಯ “ಸಿಂಗಂ ಮುನಿರಾಜ್:

ಯುವ ಅರಣ್ಯಾಧಿಕಾರಿ ಮುನಿರಾಜ್ ಅವರ  ಅರಣ್ಯಾಧಿಕಾರಿ ಹೇಗಿರಬೇಕೆಂದು ತೋರಿಸಿಕೊಟ್ಟಿದ್ದರು.  ಹೆಬ್ರಿಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ ಐದು ತಿಂಗಳಲ್ಲಿ ಅರವತ್ತಕ್ಕು ಹೆಚ್ಚು ಪ್ರಕರಣಗಳನ್ನು ಭೇಧಿಸಿ ವಾಹನಗಳನ್ನು ಮುಟ್ಟುಗೋಲು ಹಾಕಿದ್ದರು. ಇದರ ಮೂಲಕ ದಕ್ಷತೆಗೆ ಹೆಸರಾಗಿದ್ದರು.

ನಿಜವಾಗಲೂ ಅರಣ್ಯಾಧಿಕಾರಿಗಳು ಮಾಡಬೇಕಾದ ಕೆಲಸವೇನೆಂದರೆ ಪರಿಸರವನ್ನು ಕೊಳ್ಳೆ ಹೊಡೆಯುವ ಯಾರೇ ಆಗಿರಲಿ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಆದರೆ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರ ಸಾಗಾಣಿಕೆ ಮತ್ತು ಪರಿಸರ ನಾಶದಲ್ಲಿ ತೊಡಗಿರುವ ವ್ಯಕ್ತಿಗಳು, ಮುಖ್ಯವಾಗಿ ಪ್ರಭಾವಿ ರಾಜಕಾರಣಿಗಳು ಅರಣ್ಯಾಧಿಕಾರಿಗಳಿಗೆ ಬೆದರಿಸಿ, ಪೋಸಿ ಹೊಡೆದು ತಮ್ಮ ಕಾರ್ಯ ಸಾಧಿಸುತ್ತಿದ್ದಾರೆ. ಅಂತಹ ವ್ಯಕ್ತಿಗಳನ್ನು ಬೆನ್ನಟ್ಟಿದ ಕೋಲಾರ ಮೂಲದ ಅಧಿಕಾರಿ ಮುನಿರಾಜು, ವೃತ್ತಿಯೇ ಪ್ರಾಮಾಣಿಕತೆ, ಪರಿಸರವೇ ನಮ್ಮ ಧರ್ಮ ಅಂತ ಕೆಲಸ ಮಾಡುತ್ತಿದ್ದಾರೆ.

ಇತ್ತೀಚೆಗೆ ಕಾರ್ಕಳ ತಾಲೂಕಿನ ಕಬ್ಬಿನಾಲೆಯಲ್ಲಿ ಅರಣ್ಯದಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ನಿರತರಾದ ವ್ಯಕ್ತಿಗಳನ್ನು, ನಾಡ್ಪಾಲು ಅಕ್ರಮ ಮಣ್ಣು ಸಾಗಾಟ ಜಾಲವನ್ನು, ಚೆರ್ಕಾಡಿ-ಪೆರ್ಡೂರು ಅಕ್ರಮ ಮರ ಸಾಗಾಣಿಕೆಯನ್ನುಜಾಲಾಡಿದ ಅಧಿಕಾರಿ ಮುನಿರಾಜು ಅವರ ಪ್ರಾಮಾಣಿಕ ಕೆಲಸ ಪ್ರಭಾವಿ ವ್ಯಕ್ತಿಗಳಿಗೆ ಉರುಳಾಗಿದೆ. ಹೆಬ್ರಿ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಲ್ಲಿ   ಕಾಡಿನ ಅರಿವು ಮೂಡಿಸುವ ಮೂಲಕ ಬೀದಿ ನಾಟಕಗಳನ್ನು ಏರ್ಪಡಿಸುವ ಮೂಲಕ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.  ಇದರಿಂದಾಗಿ ಯುವ ಸಮುದಾಯದ ರೋಲ್‌ಮಾಡೆಲ್ ಆಗಿ ಗುರುತಿಸಿಕೊಂಡಿದ್ದರು.ಇಂತಹ ಅಧಿಕಾರಿಯನ್ನು ಉಡುಪಿ ಜಿಲ್ಲೆಯ ಅನಿಷ್ಟ ರಾಜಕಾರಣ ವರ್ಗಾವಣೆ ಮಾಡಿಸಿದೆ.

ಮುನಿರಾಜ್ ವಶಪಡಿಸಿಕೊಂಡಿದ್ದ ಮರದ ದಿಮ್ಮಿಗಳು

ವರ್ಗಾವಣೆಗೆ ಸಿಟ್ಟಾದ ಸ್ಥಳೀಯರು:
ಇವರ ವರ್ಗಾವಣೆಯ ಸುದ್ದಿ ತಿಳಿಯುತಿದ್ದಂತೆ ಹೆಬ್ರಿ ವ್ಯಾಪ್ತಿ ಯ  ನೂರಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ಅರಣ್ಯ ಇಲಾಖೆಯ ಮುಂದೆ  ಕೆಲವು ದಿನಗಳ ಹಿಂದೆ ಜಮಾಯಿಸಿದ್ದರು. ಪರಿಸರವಾದಿಗೆ ಜನರು ಬೆಂಬಲ ವ್ಯಕ್ತ ಪಡಿಸುತ್ತಿದ್ದುದು ಕಂಡು ಬಂದಿತು. ಈ ಸರಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ ಎಂದಾದಲ್ಲಿ ಇವರ ವರ್ಗಾವಣೆಯನ್ನು ಹಿಂಪಡೆದು ಹೆಬ್ರಿಯಲ್ಲೇ ಇವರನ್ನು ಉಳಿಸಿಕೊಳ್ಳಲಿ. ಹಾಗೇ ಮಾಡದಿದ್ದಲ್ಲಿ ಇಲ್ಲಿರುವ ರಾಜಕಾರಣಿಗಳು, ಅವರನ್ನು ಆಳುತ್ತಿರುವ ಸರಕಾರ ಪೊಳ್ಳು, ಸುಳ್ಳು ಸರಕಾರ ಎಂಬುದು ಸಾಬೀತಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಮೊದಲೆ ನೀಚಗೆಟ್ಟ, ಮಾನಗೆಟ್ಟ ರಾಜಕಾರಣಿಗಳು ಎಂದೆಲ್ಲಾ ಜನರ ಬಾಯಲ್ಲಿ ಕರೆಯಿಸಿಕೊಳ್ಳುವ ರಾಜಕಾರಣಿಗಳು ಅದನ್ನು ಪರಿಸರದ ಪರವಿದ್ದ  ಪ್ರಾಮಾಣಿಕ ಅಧಿಕಾರಿಯ ವಿರುದ್ದ ಸೇಡು ತೀರಿಸಿಕೊಂಡು ಸಾಬೀತುಪಡಿಸಿದರೇ?ಎನ್ನುವ ಪ್ರಶ್ನೆಗೆ ಉತ್ತರ ಹೌದು ಎನ್ನುವುದೇ ಆಗಿದೆ.