ಉಡುಪಿ: ಜೀರ್ಣೋದ್ಧಾರದ ಫಲ ಇಡೀ ಸಮಾಜಕ್ಕೆ ಸಿಗಲಿ- ಪೇಜಾವರ ಶ್ರೀ

ಅಷ್ಟಬಂಧ ಸಹಿತ ಮುಖ್ಯಪ್ರಾಣ ದೇವರ ಪುನಃಪ್ರತಿಷ್ಠೆ ಸಂಪನ್ನ

ಉಡುಪಿ: ಇಂದ್ರಾಳಿಯಲ್ಲಿ ಸಂಪೂರ್ಣ ಜೀರ್ಣೋದ್ಧಾರಗೊಂಡ ಇಂದ್ರಾಣಿ ಮುಖ್ಯ ಪ್ರಾಣ ದೇವರ ಗುಡಿಯಲ್ಲಿ ಅಷ್ಟಬಂಧ ಸಹಿತ ಶ್ರೀಮುಖ್ಯಪ್ರಾಣ ದೇವರ ಪ್ರತಿಷ್ಠೆ ಸಂಪನ್ನಗೊಂಡಿತು.
ವೇದಮೂರ್ತಿ ಪುತ್ತೂರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಉಪಾಧ್ಯಾಯರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯ ಕ್ರಮಗಳು ನಡೆದವು.
ಆದ್ಯ ಗಣಪತಿ ಯಾಗ, ಪ್ರತಿಷ್ಠಾ ಹೋಮದ ಅನಂತರ ಅಷ್ಟಬಂಧ ಸಹಿತ ಶ್ರೀ ಮುಖ್ಯಪ್ರಾಣ ದೇವರ ಪ್ರತಿಷ್ಠೆ ಜರಗಿತು. ಬಳಿಕ ಕಲಶಾಭಿಷೇಕ, ಪ್ರಾಯಶ್ಚಿತ ಹೋಮಾದಿಗಳು, ವಾಯುಸ್ತುತಿ ಹೋಮ, ನವಗ್ರಹ ಹೋಮ, ಪವಮಾನ ಹೋಮ, ತತ್ತ ಹೋಮ, ಮಧ್ಯಾಹ್ನ 12.15ಕ್ಕೆ ಮಹಾಪೂಜೆ, ಇಂದ್ರಾಣಿ ಶ್ರೀ ಪಂಚ ದುರ್ಗಾಪರಮೇಶ್ವರೀ ದೇವಸ್ಥಾನದ ಪರಿಸರದಲ್ಲಿ ಅನ್ನ ಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಸಂಜೆ ದುರ್ಗಾಪರಮೇಶ್ವರೀ ದೇವಸ್ಥಾನದ ಆವರಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು, ಹಸಿರು ಕಾನನದ ನಡುವೆ ಮೇಲೆ ಪಂಚದುರ್ಗಾಪರಮೇಶ್ವರಿ, ಕೆಳಗೆ ಮುಖ್ಯಪ್ರಾಣ ದೇವರು ಇರುವ ಪರಿಪೂರ್ಣ ದೈವಿ ಪ್ರಭಾವವಿರುವ ಕ್ಷೇತ್ರ ಇಂದ್ರಾಳಿ. ಇದರ ಜೀರ್ಣೋದ್ಧಾರದ ಫಲ ಇಡೀ ಸಮಾಜಕ್ಕೆ ಸಿಗಲಿದೆ ಎಂದರು.
ಇಂದಿನ ಯುವ ಜನತೆಯಲ್ಲಿ ಅಪಾರ ಶಕ್ತಿ ಸಾಮರ್ಥ್ಯಗಳಿವೆ. ಆದರೆ ಅದರ ಬಳಕೆ ಹೇಗೆ ಮಾಡಬೇಕು ಎನ್ನುವುದು ಅವರಿಗೆ ಗೊತ್ತಿಲ್ಲ, ರಾವಣನಲ್ಲೂ ಅಪಾರ ದೈಹಿಕ ಬಲವಿತ್ತು, ಹನುಮಂತನಲ್ಲಿಯೂ ಅಪಾರ ದೈಹಿಕ ಬಲ ಇತ್ತು. ಆದರೆ ಹನುಮಂತನಿಗೆ ದೈಹಿಕ ಬಲವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎನ್ನುವ ಅರಿವಿತ್ತು. ಆದ್ದರಿಂದಲೇ ಇಂದಿನ ಯುವ ಜನತೆಗೆ ದೇಶ ಸೇವೆ ಮತ್ತು ಈಶ ಸೇವೆಯನ್ನು ಹೇಗೆ ಮಾಡಬೇಕು ಎನ್ನುವುದಕ್ಕೆ ಮುಖ್ಯಪ್ರಾಣ ದೇವರು ಮಾದರಿಯಾಗಿದ್ದಾರೆ ಎಂದು ಶ್ರೀಗಳು ಹೇಳಿದರು.
ಇದೇ ಸಂದರ್ಭ ಕನ್ನಡ ಹನುಮಾನ್ ಚಾಲೀಸವನ್ನು ಬಿಡುಗಡೆ ಮಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಒಂದು ದೇವಾಲಯ ಜೀರ್ಣೋದ್ಧಾರ ಆದರೆ ಆ ಊರು ಸಮೃದ್ಧವಾಗಿದೆ. ಅಲ್ಲಿನ ಜನರಿಗೆ ದೇವರ ಆ ಸಾಮಾರ್ಥ್ಯ ಕೊಟ್ಟಿದ್ದಾನೆ ಎಂದರ್ಥ. ದೇವಾಲಯಗಳ ಜೀರ್ಣೋದ್ಧಾರ ಆ ಊರಿನ ಒಗ್ಗಟ್ಟನ್ನು ತೋರಿಸುತ್ತದೆ. ಇಂದ್ರಾಳಿಯಲ್ಲಿ ಅದು ಸಾಬೀತಾಗಿದೆ ಎಂದರು. ವಿಶ್ವದಲ್ಲಿ ಯುದ್ಧದ ವಾತಾವರಣ‍ವಿದ್ದರೂ ನಮ್ಮ ದೇಶದಲ್ಲಿ ಅದರಲ್ಲೂ ಕರಾವಳಿಯಲ್ಲಿ ಅದರ ಪರಿಣಾಮ ತಟ್ಚಿಲ್ಲ. ಕಾರಣ ಇಲ್ಲಿರುವ ಧಾರ್ಮಿಕ ವಾತಾವರಣ, ಈ ಮಣ್ಣಿನ ಗುಣ ಅದು ಎಂದರಲ್ಲದೆ, ಯುದ್ಧದ ವಾತಾವರಣ ಶೀಘ್ರ ಶಮನವಾಗಲಿ ಎಂದು ಈ ಸಂದರ್ಭದಲ್ಲಿ ಎಲ್ಲರೂ ಪ್ರಾರ್ಥಿಸೋಣ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು, ವಿದ್ವಾಂಸ ದಾಮೋದಕ ಶರ್ಮ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಕಾಪು ಮಾರಿಗುಡಿಯ ಆಡಳಿತ ಮೊಕ್ತೇಸರ ರಾಜರ್ಷಿ ವಾಸುದೇವ ಶೆಟ್ಟಿ, ದಾನಿಗಳಾದ ಮುಂಬೈ ಉದ್ಯಮಿ ಬುಡ್ನಾರು ಜಯಕರ ಶೆಟ್ಟಿ ಮತ್ತು ಬೆಂಗಳೂರಿನ ಉದ್ಯಮಿ ಇಂದ್ರಾಳಿಮನೆ ಕುಶಲ ಶೆಟ್ಟಿ, ಮುಖ್ಯಪ್ರಾಣ ದೇವರ ಗುಡಿಯ ವಾಸ್ತುಶಿಲ್ಪಿ ನಾಗೇಶ ಹೆಗ್ಡೆ, ಇಂದ್ರಾಣಿ ಪಂಚದುರ್ಗ ದೇವಳದ ವ್ವಸ್ಥಾಪಾಪ ಸಮಿತಿ ಅಧ್ಯಕ್ಷ ಕುಶಲ ಶೆಟ್ಟಿ ಇಂದ್ರಾಳಿ ಆಗಮಿಸಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾದ್ಯಕ್ಷ ಉದ್ಯಮಿ ಪುರುಷೋತ್ತಮ ಪಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯಕ್ ಉಪಸ್ಥಿತರಿದ್ದರು.