ಮಂಗಳೂರು: ಜೀವನದಲ್ಲಿ ಸಾಧನೆಯ ಸಾಧ್ಯತೆಗೆ ಅಡುಗೆ ಕೌಶಲವೂ ಪ್ರೇರಣಾದಾಯಕವಾಗಿದೆ. ಸಾಹಿತ್ಯ, ಸಂಗೀತ ಮೊದಲಾದ ಕಲೆಗಳು ಕೆಲವರನ್ನು ಮಾತ್ರ ಸೆಳೆಯಬಹುದು. ಆದರೆ ಉತ್ತಮ ಆಹಾರವನ್ನು ಎಲ್ಲರೂ ಮೆಚ್ಚುತ್ತಾರೆ ಎಂದು ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಅವರು ಅಭಿಪ್ರಾಯಪಟ್ಟರು.
ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜು ಮತ್ತು ಸ್ಪೈಸಸ್ ಎನ್ ಶೆಫ್ಸ್ ಇದರ ಜಂಟಿ ಸಹಯೋಗದಲ್ಲಿ ವಿಶ್ವ ಆಹಾರ ದಿನದ ಅಂಗವಾಗಿ ಆಯೋಜಿಸಿದ ಎಕ್ಸ್ಪರ್ಟ್ ಮಾಸ್ಟರ್ ಶೆಫ್ಸ್ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸರ್ವಾಂಗೀಣ ಹಿತದೃಷ್ಟಿಯಿಂದ ಇಂಥ ಕಾರ್ಯಕ್ರಮಗಳು ಕಾಲೇಜಿನಲ್ಲಿ ನಡೆಯುತ್ತವೆ. ಇದರಿಂದ ವಿದ್ಯಾರ್ಥಿಗಳ ವಿಭಿನ್ನ ಆಸಕ್ತಿಗಳೂ ಪ್ರಕಟಗೊಳ್ಳುತ್ತದೆ ಎಂದವರು ತಿಳಿಸಿದರು.
ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲ ಮಾಹೆಯ ಡಬ್ಲ್ಯುಜಿಎಸ್ಎಚ್ಎ ಸಹಾಯಕ ಪ್ರಾಧ್ಯಾಪಕ ಪ್ರೊ.ವಲ್ಸರಾಜ್ ಪಿ. ವಿದ್ಯಾರ್ಥಿಗಳಲ್ಲಿ ತಂಡ ಮನೋಭಾವ ಮತ್ತು ನಾಯಕತ್ವ ರೂಪಿಸಲು ಅಡುಗೆ ಸ್ಪರ್ಧೆ ಉತ್ತಮ ಕಾರ್ಯಕ್ರಮವಾಗಿದೆ. ಅಡುಗೆಯಲ್ಲಿಯೂ ಹೊಸತನ, ಅನ್ವೇಷಣೆ, ಕ್ರಿಯಾಶೀಲತೆಯನ್ನು ಬೆಳೆಸಲು ಸಾಧ್ಯ ಎಂದರು.
ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್ ಮಾತನಾಡಿ, ಕಲೆ-ಸಾಹಿತ್ಯದಂತೆ ಆಹಾರವೂ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಂದು ಆಹಾರದ ಹಿಂದೆ ಅದರದ್ದೇ ಆದ ಇತಿಹಾಸವಿದೆ. ಆಹಾರ ಸೇವನೆಯ ಜತೆಗೆ ಆಹಾರ ತಯಾರಿಯೂ ಒಂದು ವಿಶಿಷ್ಟ ಕಲೆಯಾಗಿದೆ ಎಂದರು.
ಸಂಸ್ಥೆಯ ಟ್ರಸ್ಟಿ ಉಸ್ತಾದ್ ರಫೀಕ್ ಖಾನ್ ಮಾತನಾಡಿ, ಹೃದಯದ ಮೂಲಕ ಪ್ರೀತಿಯಿಂದ ಮಾಡಿದ ಅಡುಗೆ ರುಚಿಕರವಾಗಿ ಉತ್ತಮ ಫಲಿತಾಂಶ ನೀಡುತ್ತದೆ ಎಂದರು.
ವಾಸ್ತುಶಿಲ್ಪ ತಜ್ಞೆ ದೀಪಿಕಾ ಎ. ನಾಯಕ್, ತೀರ್ಪುಗಾರರಾದ ಮಂಗಳೂರಿನ ಮಹಾರಾಜ ಫ್ಯಾಮಿಲಿ ರೆಸ್ಟೋರೆಂಟ್ನ ಕೋಮಲ್ ಪ್ರಭು, ಎಕ್ಸ್ಪರ್ಟ್ ಸಂಸ್ಥೆಯ ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಕೋಲಿನ್, ಆದೇಶ್ ಶೆಟ್ಟಿ, ಧೀರಜ್ ಬಿ. ಉದ್ಯಾವರ, ಸುಚಿತ್ರಾ ಎಸ್.ಶೆಣೈ, ಆರತಿ ಧೀರಜ್, ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್ ಕರಿಪ್ಪಾಲ್, ಸ್ಪೈಸಸ್ ಎನ್ ಶೆಫ್ಸ್ ಯೂನಿಟ್ ಮುಖ್ಯಸ್ಥ ರಾಜೇಶ್ ಇ.ಟಿ. ಉಪಸ್ಥಿತರಿದ್ದರು.
ಕಾಲೇಜಿನ ಮೂವರು ವಿದ್ಯಾರ್ಥಿಗಳ ಒಂದು ತಂಡದಲ್ಲಿ ಒಬ್ಬರು ಹೆತ್ತವರಿಗೆ ಭಾಗವಹಿಸುವ ಅವಕಾಶವಿತ್ತು. ಒಟ್ಟು ೧೬ ತಂಡಗಳು ಸ್ಥಳದಲ್ಲಿಯೇ ಖಾದ್ಯಗಳನ್ನು ತಯಾರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಸೇಸಮಂ ತಂಡದ ಆರ್.ಎಸ್. ನೊರೋಹ್ನ, ಸಮರ್ಥ್ ಜಗದೀಶ್, ಚೈತನ್ಯ ಟಿ. ಪಾಟೀಲ್, ಪೋಷಕರಾದ ರಮ್ಯಾ ದಯಾನಂದನ್ ಪ್ರಥಮ ಸ್ಥಾನ ಗಳಿಸಿದರು. ಲಿನಂ ತಂಡದ ತತ್ವಮಸಿ ಡಿ.ಎ, ನಿಧಿ ವಿರೂಪಾಕ್ಷ, ಅನಘಾ ಕೆ.ಎ, ಹಾಗೂ ಪೋಷಕರಾದ ಅಶ್ವಿನಿ ಬಿ.ಆರ್. ದ್ವಿತೀಯ ಸ್ಥಾನ ಗಳಿಸಿದರು. ಕ್ವಿನೋವಾ ತಂಡದ ಮನೋಜ್ಞಾ ಪಿ.ಗೌಡ, ಪ್ರೇರಣಾ ಶ್ರೀನಿವಾಸ್, ರಾಘವಿ ಗೌಡ ಹಾಗೂ ಪೋಷಕರಾದ ಲತಾ ಎಚ್.ಎಲ್. ತೃತೀಯ ಸ್ಥಾನ ಗಳಿಸಿದರು.
ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಅನಿತಾ ಪಿ. ಶೆಟ್ಟಿ ಸ್ವಾಗತಿಸಿ, ನಿಶತ್ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು. ಸ್ಪೈಸಸ್ ಎನ್ ಶೆಫ್ಸ್ ನಿರ್ದೇಶಕ ಅಶ್ವಿನ್ ಪಾಯಸ್ ವಂದಿಸಿದರು.












