ಮರ ತೆರವು ವಿಚಾರ: ಅರಣ್ಯಾಧಿಕಾರಿ- ಶಾಸಕರ ಮಧ್ಯೆ‌ ಮಾತಿನ ಚಕಮಕಿ, ಪ್ರಾಮಾಣಿಕ ಅಧಿಕಾರಿಯನ್ನು ಎತ್ತಂಗಡಿ ಮಾಡಲು ಬಿಜೆಪಿ ಟಾರ್ಗೆಟ್?

ಉಡುಪಿ: ಬ್ರಹ್ಮಾವರ ವ್ಯಾಪ್ತಿಯ ಕುಂಜಾರು ರಸ್ತೆ ಅಗಲೀಕರಣ ಮತ್ತು ಮರ ತೆರವು ವಿಚಾರಕ್ಕೆ ಸಂಬಂಧಿಸಿ ಶಾಸಕರು ಮತ್ತು ಅರಣ್ಯಾಧಿಕಾರಿ ನಡುವೆ ಸೋಮವಾರ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು.
ಅರಣ್ಯ ಇಲಾಖೆಯ ಮರ ತೆರವು ಮಾಡುವ ವಿಚಾರ ಹೆಬ್ರಿ ವಲಯ ಅರಣ್ಯಾಧಿಕಾರಿ ಮುನಿರಾಜ್ ಮತ್ತು ಶಾಸಕ ರಘುಪತಿ ಭಟ್  ನಡುವೆ ವಾಕ್ಸಾಮರಕ್ಕೆ ಕಾರಣ ವಾಯಿತು.
ಸಭೆಯಲ್ಲಿ ಅಗೌರವ ತೋರಿದ್ದಾರೆ ಎಂದು ಶಾಸಕ ರಘುಪತಿ ಭಟ್ ಅಧಿಕಾರಿ ವಿರುದ್ಧ ಕೆಂಡಾಮಂಡಲವಾದರು.
ನಾನು ಅಗೌರವ ತೋರಿಲ್ಲ. ನಾನು ಸರ್ಕಾರಿ ಇಲಾಖೆಯ ಅಧಿಕಾರಿ. ಹಾಗಾಗಿ ಗೌರವಕೊಟ್ಟು ಮಾತನಾಡಿ ಎಂದು ಅಧಿಕಾರಿ ಶಾಸಕರಿಗೆ ಹೇಳಿದರು. ಅಧಿಕಾರಿ ಈ ಮಾತಿಗೆ ಮತ್ತಷ್ಟು ಕೆರಳಿದ ಶಾಸಕರು ಜನಪ್ರತಿನಿಧಿಯ ಸಾಲಿನಲ್ಲಿ ಕುಳಿತ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಗುಡುಗಿದರು. ನಂತರ ಅಧಿಕಾರಿಗಳ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು.
ಮುನಿರಾಜ್ ಅಧಿಕಾರಿಗಳ ಸಾಲಿನಲ್ಲಿ ಕುಳಿತ ನಂತರ ಶಾಸಕರು ಹಾಗೂ ಅಧಿಕಾರಿಯ ಜಟಾಪಟಿ ಮುಂದುವರಿಯಿತು.
ಪ್ರಾಮಾಣಿಕ ಅಧಿಕಾರಿ ಬಿಜೆಪಿ ಟಾರ್ಗೆಟ್:
ಅರಣ್ಯಾಧಿಕಾರಿ ಮುನಿರಾಜು ತಮ್ಮ ಪ್ರಾಮಾಣಿಕ ಪರಿಸರ ಪ್ರೀತಿಯಿಂದ ಕೆಲಸ ಮಾಡುತ್ತಿರುವವರು.ಇತ್ತೀಚೆಗೆ ಅಕ್ರಮ ಮರದ ದಂಧೆಯಲ್ಲಿ ನಿರತರಾಗಿದ್ದ ಬಿಜೆಪಿ‌ ರಾಜಕಾರಣಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದರು.ಈಗ ಇದನ್ನೇ ತಲೆಯಲ್ಲಿಟ್ಟುಕೊಂಡು ಬಿಜೆಪಿ ನಾಯಕರು ಸಭೆಯಲ್ಲಿ ಒಗ್ಗಟ್ಟಾಗಿ ಅಧಿಕಾರಿಯನ್ನು ಸಮಸ್ಯೆಯ ಸುಳಿಯಲ್ಲಿ‌ ಸಿಲುಕಿಸಿದ್ದಾರೆ.ಮರದ ದಂಧೆಯಲ್ಲೇ ಬೆಳೆಯುತ್ತಿರುವ ಸ್ಥಳೀಯ ಬಿಜೆಪಿ ನಾಯಕರುಗಳು ಪ್ರಾಮಾಣಿಕ ಅಧಿಕಾರಿಯನ್ನು ಎತ್ತಂಗಡಿ ಮಾಡಿಸುವ ಬಗ್ಗೆ ಪ್ಲಾನ್ ಹೆಣೆದಿದ್ದಾರೆ.ಇಂತಹ ಅಧಿಕಾರಿಯನ್ನು ಉಳಿಸಿಕೊಳ್ಳಬೇಕು ಎಂದು ಪರಿಸರ ಪ್ರೀಯರು ಆಗ್ರಹಿಸಿದ್ದಾರೆ.