ಮಣಿಪಾಲ: ಹಜ್ ಯಾತ್ರಾರ್ಥಿಗಳಿಗೆ ತರಬೇತಿ, ಚುಚ್ಚುಮದ್ದು ವಿತರಣೆ

ಮಣಿಪಾಲ, ಜೂ.28: ಹಜ್ ಕಮಿಟಿ ವತಿಯಿಂದ ಉಡುಪಿ ದಾರುಲ್ ಹುದಾ, ಜಮಾಅತೆ ಇಸ್ಲಾಮಿ ಹಿಂದ್, ಮಣಿಪಾಲ ಜುಮಾ ಮಸೀದಿ, ಜಮೀಯ್ಯುತುಲ್ ಫಲಾಹ್ ಉಡುಪಿ ಘಟಕ, ಜಿಲ್ಲಾ ಮುಸ್ಲಿಮ್ ಒಕ್ಕೂಟ, ಜಿಲ್ಲಾ ವಕ್ಫ್ ಸಲಹಾ ಮಂಡಳಿ, ಜಿಲ್ಲಾ ಸಂಯುಕ್ತ ಜಮಾಅತ್‌ಗಳ ಸಹಯೋಗ ದೊಂದಿಗೆ ಜಿಲ್ಲೆಯ ಹಜ್ ಯಾತ್ರಾರ್ಥಿಗಳಿಗೆ ತರಬೇತಿ ಹಾಗೂ ಚುಚ್ಚು ಮದ್ದು ನೀಡುವ ಕಾರ್ಯಕ್ರಮವನ್ನು ಶುಕ್ರವಾರ ಮಣಿಪಾಲ ಮಸೀದಿಯಲ್ಲಿ ಆಯೋಜಿಸಲಾಯಿತು.
ನೇಜಾರು ಮಸೀದಿಯ ಖತೀಬ್ ಉಸ್ಮಾನ್ ಮದನಿ ಕನ್ನಡದಲ್ಲಿ, ಮಣಿಪಾಲ ಮಸೀದಿಯ ಖತೀಬ್ ವೌಲಾನ ಸಾಧಿಕ್ ಖಾಸ್ಮಿ ಮಾಲಯಾಳಂನಲ್ಲಿ, ವೌಲಾನ ಶೇಕ್ ಫರ್ವೆಝ್ ಆಲಂ ಮತ್ತು ಝಮೀರ್ ಜಾಮೈ ಉರ್ದು ವಿನಲ್ಲಿ ತರಬೇತಿ ನೀಡಿದರು. 
ವೈದ್ಯ ಡಾ.ಮುಹಮ್ಮದ್ ರಫೀಕ್ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮ ಸಂಘಟಕ ಖಾದಿಮುಲ್ ಹಜ್ಜಾಜ್‌ನ ಅಧ್ಯಕ್ಷ ಯಾಹ್ಯಾ ನಕ್ವಾ, ಸದಸ್ಯ ರೆಹಮತುಲ್ಲಾ, ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ಲ ಪರ್ಕಳ, ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್, ಸಂಯುಕ್ತ ಜಮಾಅತ್ ಅಧ್ಯಕ್ಷ ನೇಜಾರು ಅಬೂಬಕ್ಕರ್ ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ 37 ಮಹಿಳೆಯರು ಸೇರಿದಂತೆ ಒಟ್ಟು 76 ಮಂದಿ ಈ ಬಾರಿ ಹಜ್ ಯಾತ್ರೆಗೆ ತೆರಳಲಿದ್ದಾರೆ. ಇವರು ಜು.17, 18 ಮತ್ತು 19ರಂದು ನಾಲ್ಕು ತಂಡಗಳಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ನಾಲ್ಕು ವಿಮಾನಗಳಲ್ಲಿ ಹಜ್‌ಗೆ ತೆರಳಲಿರುವರು.