ಮಣಿಪಾಲ: ಬ್ರಹ್ಮಾವರ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ನೇಣಿಗೆ ಶರಣು

ಮಣಿಪಾಲ: ಬ್ರಹ್ಮಾವರದ ಸಹಕಾರಿ ಸೊಸೈಟಿವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಹಾಡಿಯಲ್ಲಿ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯ ಪೆರಂಪಳ್ಳಿ ಎಂಬಲ್ಲಿ ನಡೆದಿದೆ.

ಬ್ರಹ್ಮಾವರದ ಉಪ್ಪಿನಕೋಟೆಯ ಸೊಸೈಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೃಥ್ವಿ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಸಾಲದ ಸುಳಿಗೆ ಸಿಲುಕಿದ್ದ ಎನ್ನಲಾಗಿದೆ. ಅಲ್ಲದೆ ಇಂದು ಮುಂಜಾನೆ ಈತ ತನ್ನ ಮಾವನಿಗೆ ‘ತಾನು ವಿಪರೀತ ಸಾಲ ಮಾಡಿದ್ದು, ನನಗೆ ಬದುಕಲು ಸಾಧ್ಯವಾಗುತ್ತಿಲ್ಲ. ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ವಾಟ್ಸಾಪ್ ಸಂದೇಶ ಕಳುಹಿಸಿದ್ದನು.

ಬಳಿಕ ಪೆರಂಪಳ್ಳಿಯ ಕುಕ್ಕುಂಜೆ ಹಾಡಿಯೊಂದರಲ್ಲಿ ಬಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಮಾವನಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ ನಂತರ, ಪೃಥ್ವಿ‌ ತನ್ನ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡಿದ್ದನು. ಇದರಿಂದ ಅನುಮಾನಗೊಂಡು ಮಾವ ಕೂಡಲೇ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಮೊಬೈಲ್ ಟವರ್ ಲೋಕೇಷನ್ ಆಧಾರದಲ್ಲಿ ಆತ ಪೆರಂಪಳ್ಳಿಯಲ್ಲಿ ಇರುವುದು ಗೊತ್ತಾಗಿದೆ.

ಆದರೆ ಪೊಲೀಸರು ಬರುವ ಮೊದಲೇ ಬೈಕ್, ಮೊಬೈಲ್ ಮಾರ್ಗ ಬದಿಯಲ್ಲಿ ಇಟ್ಟು ಪೃಥ್ವಿ‌ ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.