ಮಂಗಳೂರು: ಲಿಫ್ಟ್ ನಲ್ಲಿ ಸಿಲುಕಿ ಬೆಳ್ತಂಗಡಿ ಬೆಳಾಲು ಯುವಕ ಮೃತ್ಯು

ಮಂಗಳೂರು: ನಗರದ ಕುಂಟಿಕಾನ ಬಳಿಯ ಆನ್‌ಲೈನ್ ಡೆಲಿವರಿ ಸಂಸ್ಥೆಯೊಂದರ ಕಟ್ಟಡದ ಲಿಫ್ಟ್‌ನಲ್ಲಿ ಸಿಲುಕಿ ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ.ಬೆಳ್ತಂಗಡಿಯ ಬೆಳಾಲು ನಿವಾಸಿ ನೌಫಲ್ ಮೃತದುರ್ದೈವಿ. ನೌಫಲ್ ಕಾರ್ಯನಿಮಿತ್ತ ಲಿಫ್ಟ್‌ನಲ್ಲಿ ಮೇಲಕ್ಕೆ ಹೋಗುವಾಗ ಒಂದನೇ ಮಹಡಿ ಮತ್ತು ನೆಲಮಹಡಿ ಮಧ್ಯಭಾಗದಲ್ಲಿ ಲಿಫ್ಟ್ ಕೆಟ್ಟು ನಿಂತಿದೆ.

ಈ ಸಂದರ್ಭ ನೌಫಲ್ ಅವರು ಲಿಫ್ಟ್ ನಲ್ಲಿ ಬಾಕಿಯಾಗಿರುವ ಬಗ್ಗೆ ಮಾಹಿತಿ ಪಡೆದ ಅಲ್ಲಿದ್ದ ಸಹೋದ್ಯೋಗಿಗಳು ರಕ್ಷಣೆಗೆ ಧಾವಿಸಿದ್ದಾರೆ.

ಒಂದನೇ ಮಹಡಿಯಲ್ಲಿ ಲಿಫ್ಟ್‌ನ ಅರ್ಧಭಾಗ ಇದ್ದ ಕಾರಣ ಲಿಫ್ಟ್ ಬಾಗಿಲು ಬಲವಂತದಿಂದ ತೆರೆದು ನೌಫಲ್ ರಕ್ಷಣೆಗೆ ಮುಂದಾಗಿದ್ದಾರೆ. ಕೈ ಹಿಡಿದು ಮೇಲೆತ್ತುವ ಸಂದರ್ಭ ಏಕಾಏಕಿ ಲಿಫ್ಟ್ ಚಲಿಸಿ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಗಂಭೀರ ಗಾಯಗೊಂಡ ನೌಫಲ್ ಮೃತರಾಗಿದ್ದಾರೆ. ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.