ಕರೊನಾ ಸೋಂಕಿತ ರೋಗಿಗಳಿಗೆ ಜೀವ ರಕ್ಷಕ ಸಾಧನ: ಮಂಗಳೂರಲ್ಲಿ ಹೊಸ ಪ್ರಯೋಗ

ಮಂಗಳೂರು: ಗಂಭೀರ ಸ್ಥಿತಿಯಲ್ಲಿರುವ ಕರೊನಾ ಸೋಂಕಿತ ರೋಗಿಗಳಿಗೆ ಜೀವ ರಕ್ಷಕ ಸಾಧನವೊಂದು ಮಂಗಳೂರಿನಲ್ಲಿ ತಯಾರಾಗಿದೆ.
ನಗರದ ಮಂಗಳಾ ಹಾಸ್ಪಿಟಲ್‌ನ ಮೆಡಿಕಲ್ ಡೈರೆಕ್ಟರ್ ಡಾ. ಗಣಪತಿ ಅವರ ತಂಡ ಆಕ್ಸಿಜನ ಬಬ್ಬಲ್ ಹೆಲ್ಮೆಟ್‌ನ್ನು ರೆಡಿ ಮಾಡಿದ್ದಾರೆ. ವೆಂಟಿಲೇಟರ್ ಅಳವಡಿಸಿ ಕೃತಕ ಉಸಿರಾಟ ನೀಡಬೇಕಾದ ರೋಗಿಗಳಿಗೆ ಈ ಸಾಧನ ಬಹಳಷ್ಟು ಉಪಯೋಗಕಾರಿಯಾಗಲಿದೆ. ಕರೊನಾ ಸೋಂಕಿನಿಂದ ರೋಗಿಯ ಆರೋಗ್ಯ ಸ್ಥಿತಿ ಗಂಭೀರ ಆಗಿ ಉಸಿರಾಟ ಸಮಸ್ಯೆ ಎದುರಾದಾಗ ಕೃತಕ ಉಸಿರಾಟದ ವ್ಯವಸ್ಧೆ ಮಾಡಬೇಕಾಗುತ್ತದೆ.
ಈ ಸಂದರ್ಭ ಶ್ವಾಸನಾಳಕ್ಕೆ ಟ್ಯೂಬ್ ಹಾಕಿ ವೆಂಟಿಲೇಟರ್ ಅಳವಡಿಸಬೇಕಾಗುತ್ತದೆ. ಆದ್ರೆ ಈ ರೀತಿ ಮಾಡಿದ ಪ್ರಕರಣದಲ್ಲಿ ಮರಣ ಪ್ರಮಾಣ ಹೆಚ್ಚಾಗಿದೆ. ಇದಕ್ಕಾಗಿ ಆಕ್ಸಿಜನ್ ಬಬ್ಬಲ್ ಹೆಲ್ಮೆಟ್ ಯೂಸ್ ಮಾಡಿದ್ರೆ ರೋಗಿ ಚೇತರಿಕೆಗೆ ಹೆಚ್ಚು ಸಹಕಾರಿಯಾಗಲಿದೆ. ಇಲ್ಲಿ ಶ್ವಾಸನಾಳಕ್ಕೆ ಟ್ಯೂಬ್ ಅಳವಡಿಸುವ ಬದಲು ಈ ಹೆಲ್ಮೆಟ್ ಒಳಗೆ ಆಕ್ಸಿಜನ್ ಸಪ್ಲೈ ಮಾಡುವ ವ್ಯವಸ್ಥೆ ಮಾಡಲಾಗಿದೆ. ಆಕ್ಸಿಜನ್ ಹೊರಗೆ ಹೋಗದಾಗೆ ರಬ್ಬರ್ ಶೀಟ್‌ನ್ನು ಈ ಹೆಲ್ಮೆಟ್‌ನಲ್ಲಿ ಅಳವಡಿಸಲಾಗಿದೆ. ವಿದೇಶಗಳಲ್ಲಿ ಇದು ಬಳಕೆಯಲ್ಲಿದ್ದು ಆದ್ರೆ ಇದೀಗ ಅಲ್ಲಿಂದ ಅಮದು ಮಾಡಿ ಭಾರತಕ್ಕೆ ತರಿಸುವುದಕ್ಕೆ ಅಸಾಧ್ಯ. ಅದಕ್ಕಾಗಿ ಅದೇ ಮಾಡೆಲ್‌ನ್ನು ಇಟ್ಟುಕೊಂಡು ಸ್ಥಳೀಯವಾಗಿ ಸಿಗುವ ಮೆಟಿರೀಯಲ್ ಬಳಸಿಕೊಂಡು ಮಂಗಳೂರಿನ ವೈದ್ಯರ ತಂಡ ಇದನ್ನು ರೆಡಿ ಮಾಡಿದೆ.
ಇದರಲ್ಲಿ ರೋಗಿಗೆ ಸುಲಭವಾಗಿ ಉಸಿರಾಡಬಹುದಲ್ಲದೇ, ಕರೊನಾ ರೋಗಿಯಿಂದ ಐಸಿಯುನಲ್ಲಿರುವ ಇತರ ರೋಗಿಗಳಿಗೆ, ಚಿಕಿತ್ಸೆ ನೀಡುವ ವೈದ್ಯರಿಗೆ, ದಾದಿಯರಿಗೆ ಸೋಂಕು ಹರಡುವ ಸಾಧ್ಯತೆಯೂ ತುಂಬಾ ಕಡಿಮೆಯಿದೆ. ಇದರ ಜೊತೆ ಈ ವೈದ್ಯರ ತಂಡ ಸ್ಮಾಕ್ಲಿಂಗ್ ಮಾಸ್ಕ್‌ನ್ನು ಸಹ ಕೃತಕ ಉಸಿರಾಟ ವ್ಯವಸ್ಥೆಗೆ ಬಳಸುವಂತೆ ರೆಡಿ ಮಾಡಿದ್ದಾರೆ.