ಮಂಡ್ಯ ದೇವಳದಲ್ಲಿ ಅರ್ಚಕರ ಹತ್ಯೆ: ಪೇಜಾವರ ಶ್ರೀ ಖಂಡನೆ 

ಉಡುಪಿ: ಮಂಡ್ಯದ ಪ್ರಾಚೀನ ಅರ್ಕೇಶ್ವರ ಸ್ವಾಮೀ ದೇವಸ್ಥಾನದಲ್ಲಿ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆಗೈದು, ಬೆಲೆಬಾಳುವ ಸೊತ್ತುಗಳನ್ನು ದೋಚಿರುವ ಪೈಶಾಚಿಕ ಕೃತ್ಯವನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರವಾಗಿ ಖಂಡಿಸಿದ್ದಾರೆ.
ಪವಿತ್ರ ಸ್ಥಳದಲ್ಲಿ ನಡೆದಿರುವ ಈ ದುಷ್ಕೃತ್ಯದಿಂದ ಅತ್ಯಂತ ವಿಷಾದವಾಗಿದೆ. ಈ ಕೃತ್ಯವನ್ನು ನಡೆಸಿದ ದುರುಳರನ್ನು ಸರಕಾರ ಶೀಘ್ರ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮೃತ ಅರ್ಚಕರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು. ನಾಡಿನಲ್ಲಿ ಇಂತಹ ಅಮಾನವೀಯ ಘಟನೆಗಳು ಮುಂದೆಂದೂ ನಡೆಯದಂತೆ ಸಮಾಜ ಮತ್ತು ಸರಕಾರಗಳು ಎಚ್ಚರಿಕೆ ವಹಿಸಬೇಕು. ದೇವಳಗಳ ಬೆಲೆ ಬಾಳುವ ವಸ್ತುಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂರಕ್ಷಿಸಲು ಎಲ್ಲ ದೇವಳಗಳೂ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಪೇಜಾವರ ಶ್ರೀಗಳು ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.‌