ಮಾಹೆಯ 33ನೇ ಘಟಕೋತ್ಸವ: 1648 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ.

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ 33ನೇ ಘಟಿಕೋತ್ಸವದ ಮೊದಲ ದಿನದ ಕಾರ್ಯಕ್ರಮವು ಶೈಕ್ಷಣಿಕ ವೈಭವಕ್ಕೆ ಸಾಕ್ಷಿಯಾಯಿತು.

ಮಣಿಪಾಲದಲ್ಲಿ ಶುಕ್ರವಾರ ನಡೆದ ಈ ಕಾರ್ಯಕ್ರಮಕ್ಕೆ ಮಾಹೆಯ ಸಹ ಕುಲಾಧಿಪತಿ ಡಾ. ಹೆಚ್. ಎಸ್. ಬಲ್ಲಾಳ್ ಅವರು ಔಪಚಾರಿಕವಾಗಿ ಚಾಲನೆ ನೀಡಿದರು.

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ-2025ರಲ್ಲಿ (ಎನ್‌ಐಆರ್‌ಎಫ್‌) ವಿಶ್ವವಿದ್ಯಾಲಯಗಳ ವಿಭಾಗದಲ್ಲಿ 3ನೇ ಸ್ಥಾನ ಗಳಿಸುವ ಮೂಲಕ ಮಾಹೆಯು ಭಾರತೀಯ ಉನ್ನತ ಶಿಕ್ಷಣದಲ್ಲಿ ತನ್ನ ನಾಯಕತ್ವವನ್ನು ಪುನರುಚ್ಚರಿಸಿದೆ. ಘಟಿಕೋತ್ಸವದ ಮೊದಲ ದಿನದಂದು 64 ಪಿಎಚ್‌ಡಿ ಪದವೀಧರರು ಸೇರಿ ಒಟ್ಟು 1,648 ವಿದ್ಯಾರ್ಥಿಗಳಿಗೆ ಪದವಿ ನೀಡಲಾಯಿತು. ಇದರೊಂದಿಗೆ ಅತ್ಯುತ್ತಮ ನಾಲ್ಕು ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ‘ಡಾ. ಟಿ.ಎಂ.ಎ. ಪೈ ಚಿನ್ನದ ಪದಕ’ ನೀಡಿ ಗೌರವಿಸಲಾಯಿತು.

ಘಟಿಕೋತ್ಸವದ ಮುಖ್ಯ ಅತಿಥಿಯಾದ ದೆಹಲಿ-ಎನ್‌ಸಿಆರ್ನ ಶಿವನಾಡರ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅನನ್ಯ ಮುಖರ್ಜಿ ಅವರು ಮಾತನಾಡಿ, ʼಕೃತಕ ಬುದ್ಧಿಮತ್ತೆ (AI) ಯಿಂದ ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ಹೆಜ್ಜೆ ಇಡುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಜವಾಬ್ದಾರಿಗಳ ಕುರಿತು ಅವರು ಬೆಳಕು ಚೆಲ್ಲಿದರು. ಎಐ ತಂತ್ರಜ್ಞಾನವನ್ನು ವಿಶ್ಲೇಷಣೆ ಮತ್ತು ದತ್ತಾಂಶ ಅನ್ವಯಿಸಲು ಮಾತ್ರ ಬಳಸಬೇಕು. ಆದರೆ ಅಂತಿಮ ನಿರ್ಧಾರವನ್ನು ಮನುಷ್ಯನೇ ಕೈಗೊಳ್ಳಬೇಕು ಎನ್ನುವುದನ್ನು ಅವರು ಒತ್ತಿ ಹೇಳಿದರು. AI ಸಾಮರ್ಥ್ಯ ಬಗ್ಗೆ ಹೇಳುವ ಜೊತೆಗೆ ಅದರಿಂದಾಗುವ ನೈತಿಕ, ಸಾಮಾಜಿಕ ಮತ್ತು ತಾಂತ್ರಿಕ ಸವಾಲುಗಳ ಬಗ್ಗೆ ಎಚ್ಚರಿಕೆ ನೀಡಿದರು.

ʼತಮ್ಮ ಶಿಕ್ಷಣವನ್ನು ಸಹಾನುಭೂತಿ, ವಿವೇಕ ಮತ್ತು ನೈತಿಕ ತಿಳುವಳಿಕೆಯೊಂದಿಗೆ ಬಳಸಬೇಕು. ‘ವಿಕಸಿತ ಭಾರತ’ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಪ್ರೇರೇಪಿಸಿದ ಅವರು, ʼಆ ‘ವಿಕಾಸಕ್ಕೆ’ ನಿಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಇಂದೇ ಯೋಚಿಸಿ. ನೀವು ಅಲ್ಗಾರಿದಮ್‌ ಮತ್ತು ನೈತಿಕತೆಯನ್ನು ಹೇಗೆ ಸಮ್ಮಿಲನಗೊಳಿಸುತ್ತೀರಿ? ನ್ಯೂರಲ್ ನೆಟ್‌ವರ್ಕ್‌ಗಳು ಮತ್ತು ಮಾನವ ನೆಟ್‌ವರ್ಕ್‌ಗಳು ಹೇಗೆ ಸಮೀಕರಿಸಲಾಗುತ್ತದೆ? ಕೇವಲ ಮೂಕ ಪ್ರೇಕ್ಷಕರಾಗುವುದಕ್ಕಿಂತ, ನೀವು ಆ ಬದಲಾವಣೆಯ ಸಕ್ರಿಯ ನಾಯಕರಾಗುವ ಬಗ್ಗೆ ಯೋಚಿಸಿʼ ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಮಾಹೆಯ ನಾವೀನ್ಯತೆ, ಉದ್ಯಮಶೀಲತೆ ಮತ್ತು ಶೈಕ್ಷಣಿಕ ಶ್ರೇಷ್ಠತೆಯ ಬಗ್ಗೆ ವಿವರಿಸಿದ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ವಿಎಸ್‌ಎಂ (ನಿವೃತ್ತ), ʼಕ್ಯಾಂಪಸ್‌ನಲ್ಲಿನ ಅತ್ಯಾಧುನಿಕ ಕಟ್ಟಡಗಳು, ಸುಧಾರಿತ ಡಿಜಿಟಲ್ ಮೂಲಸೌಕರ್ಯ ಮತ್ತು 32-ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಕುರಿತು ಮಾಹಿತಿ ನೀಡುವ ಮೂಲಕ ಸುಸ್ಥಿರತೆ, ಡಿಜಿಟಲ್ ಪ್ರಗತಿ ಮತ್ತು AI ಕ್ರಾಂತಿಯ ಬಗ್ಗೆ ಮಾಹೆ ಹೊಂದಿರುವ ಬದ್ಧತೆಯನ್ನು ಒತ್ತಿ ಹೇಳಿದರು. ಇದರಿಂದಾಗಿಯೆ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಾಯಕತ್ವ ಸ್ಥಾನಕ್ಕೆ ನಮ್ಮ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಸಾಧ್ಯವಾಗುತ್ತಿದೆʼ ಎಂದು ತಿಳಿಸಿದರು.

ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರ 90ನೇ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ರೂಪಿಸಲಾದ ಅಂಚೆ ಲಕೋಟೆಯನ್ನು ಮಾಹೆ ಟ್ರಸ್ಟ್‌ನ ಟ್ರಸ್ಟಿಗಳಾದ ಶ್ರೀಮತಿ ವಸಂತಿ ಪೈ ಮತ್ತು ಉಡುಪಿ ವಿಭಾಗದ ಅಂಚೆ ಅಧೀಕ್ಷಕರಾದ ಶ್ರೀ ರಮೇಶ್ ಪ್ರಭು ಅವರು ಜಂಟಿಯಾಗಿ ಬಿಡುಗಡೆ ಮಾಡಿದರು.

ಮೊದಲ ದಿನದ ಘಟಿಕೋತ್ಸವದಲ್ಲಿ 64 ಪಿಎಚ್‌ಡಿ ಪದವೀಧರರ ಸಾಧನೆಗಳನ್ನು ಸಂಭ್ರಮಿಸುವುದರ ಜೊತೆಗೆ, ನಾಲ್ಕು ಅತ್ಯುತ್ತಮ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ‘ಡಾ. ಟಿ.ಎಂ.ಎ. ಪೈ ಚಿನ್ನದ ಪದಕ 2025’ ನೀಡಿ ಗೌರವಿಸಲಾಯಿತು. ಅವರುಗಳೆಂದರೆ, ಪೊನ್ನಮ್ಮ ಎಂ. ಎಂ. (ಎಂ.ಎಸ್ಸಿ ವೈದ್ಯಕೀಯ ಜೈವಿಕ ತಂತ್ರಜ್ಞಾನ, ಎಂಎಸ್‌ಎಲ್‌ಎಸ್‌ ಮಣಿಪಾಲ್‌), ನಿಕಿತಾ ಮರೀನಾ ಸಲ್ದಾನ (ಬಿ.ಫಾರ್ಮ್, ಎಂಸಿಒಪಿಎಸ್ ಮಣಿಪಾಲ್‌), ಸಿರಿಲ್ ಬಿಜಿ (ಎಂ.ಎಸ್ಸಿ ಜೈವಿಕ ದತ್ತಾಂಶ, ಪಿಎಸ್‌ಪಿಎಚ್‌ ಮಣಿಪಾಲ್‌) ಮತ್ತು ವಿಂಧ್ಯ ಎಸ್. ಬಾದಲ್ (ಬಿ.ಎಸ್ಸಿ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟೆಟಿಕ್ಸ್, ಎಂಸಿಎಚ್‌ಪಿ ಮಣಿಪಾಲ್‌).

ಈ ಪ್ರತಿಷ್ಠಿತ ಗೌರವವು ತಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಿದೆ ಎಂದು ಹೇಳಿದ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳು, ಮಾಹೆಯು ಕೇವಲ ಪದವಿ ನೀಡುವುದಲ್ಲದೆ, ವೈಯಕ್ತಿಕ ಸಾಮರ್ಥ್ಯ ಮತ್ತು ವೃತ್ತಿಪರ ಮೌಲ್ಯಗಳನ್ನು ಬೆಳೆಸುತ್ತದೆ. ಇಲ್ಲಿನ ಶಿಕ್ಷಣದಿಂದಾಗಿ ನುರಿತ, ಉದ್ಯಮಕ್ಕೆ ತಕ್ಕ ವೃತ್ತಿಪರರಾಗಿ ನಾವು ರೂಪುಗೊಂಡಿದ್ದೇವೆʼ ಎಂದರು. ಆರೋಗ್ಯ, ಔಷಧ ವಿಜ್ಞಾನ ಮತ್ತು ಸಮುದಾಯ ಪೋಷಣೆಯ ಕ್ಷೇತ್ರಗಳಲ್ಲಿ ನಾವೀನ್ಯತೆ ಹಾಗೂ ಸಕಾರಾತ್ಮಕ ಬದಲಾವಣೆ ತರುವ ತಮ್ಮ ಕಾಯಕದಲ್ಲಿ ನಿರಂತರವಾಗಿ ಮುಂದುವರೆಯಲು ಈ ಪ್ರಶಸ್ತಿಯು ಸ್ಫೂರ್ತಿ ನೀಡಿದೆ ಎಂದು ಹೇಳಿದರು.

33ನೇ ಘಟಿಕೋತ್ಸವದ ಮೊದಲ ದಿನದಲ್ಲಿ ಎಲ್ಲಾ ಪದವೀಧರರ ಶ್ಲಾಘನೀಯ ಸಾಧನೆಗಳನ್ನು ಗೌರವಿಸಲಾಯಿತು. ಈ ಮೂಲಕ, ನವೀನ, ಸಾಮಾಜಿಕ ಕಳಕಳಿಯುಳ್ಳ ಮತ್ತು ಉನ್ನತ ಕೌಶಲದ ವೃತ್ತಿಪರರನ್ನು ಸಿದ್ಧಪಡಿಸಿ, ಭವಿಷ್ಯಕ್ಕೆ ಅಣಿಗೊಳಿಸುವ ಮಾಹೆಯ ಬದ್ಧತೆಯನ್ನು ಮಾಹೆ ದೃಢಪಡಿಸಿತು. ವಿದ್ಯಾರ್ಥಿಗಳು, ಅವರ ಕುಟುಂಬದವರು ಮತ್ತು ಅಧ್ಯಾಪಕರ ಹೆಮ್ಮೆಯ ಕ್ಷಣಗಳಿಗೆ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಎರಡನೇ ದಿನದ ಘಟಿಕೋತ್ಸವದಲ್ಲಿ ಹೆಚ್ಚಿನ ಮೈಲಿಗಲ್ಲುಗಳು ಮತ್ತು ಶೈಕ್ಷಣಿಕ ಶ್ರೇಷ್ಠತೆಯ ನಿರೀಕ್ಷೆಯೊಂದಿಗೆ ಮೊದಲ ದಿನದ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿತು.