ಮಧು ಬಂಗಾರಪ್ಪ ಭರವಸೆ : ಮುಂದಿನ ವರ್ಷದಿಂದ ಉಚಿತ ಬೈಸಿಕಲ್ ವಿತರಣೆ

ಬೆಳಗಾವಿ: ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಕ್ಕಳಿಗೆ ಸೈಕಲ್ ಕೊಡಬಾರದಂತಲ್ಲ, ಇದಕ್ಕೆ ನಮಗೆ ಹಣಕಾಸು ಸಮಸ್ಯೆಯೂ ಆಗುವುದಿಲ್ಲ. ಆದರೆ, ಒಂದೇ ಬಾರಿ ಅಷ್ಟು ಸೈಕಲ್​ಗಳ ಉತ್ಪಾದನೆ ಕಷ್ಟವಾಗಲಿದೆ. ಹಾಗಾಗಿ ಈ ಬಾರಿ ಮೊಟ್ಟೆ ವಿತರಣೆಗೆ ಆದ್ಯತೆ ನೀಡಲಾಗುತ್ತದೆ.

ನಾವು ಬೇಡಿ ನೀಡಿದ ಕಡೆಯಲ್ಲೆಲ್ಲಾ ಮಕ್ಕಳು ಸೈಕಲ್ ಕೇಳಿದ್ದಾರೆ. ಹಣದ ಕೊರತೆ ಆಗಲ್ಲ. ಮುಂದಿನ ವರ್ಷದಿಂದ ಸೈಕಲ್ ಕೊಡಲಿದ್ದೇವೆ ಎಂದು ಭರವಸೆ ನೀಡಿದರು. ರಾಜ್ಯದ ಪ್ರಾಥಮಿಕ ಹಾಗು ಪ್ರೌಢಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ಯೋಜನೆಯಡಿ ಮುಂದಿನ ವರ್ಷದಿಂದ ಸೈಕಲ್ ವಿತರಣೆ ಆರಂಭಿಸಲಾಗುತ್ತದೆ.ಈ ಬಾರಿ ಮೊಟ್ಟೆ ವಿತರಣೆಗೆ ಆದ್ಯತೆ ನೀಡಲಾಗುವುದು, ಮುಂದಿನ ವರ್ಷದಿಂದ ಉಚಿತ ಸೈಕಲ್​ ನೀಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ನಾವು ಉಚಿತ ಸಮವಸ್ತ್ರ ಕೊಡಲಿದ್ದೇವೆಯೇ ಹೊರತು ಅದರ ಹಣ ಕೊಡಲ್ಲ, ಕಳೆದ ಸರ್ಕಾರ ಪೂರೈಕೆ ಮಾಡಿದ್ದ ಸಮವಸ್ತ್ರದ ಗುಣಮಟ್ಟ ಕಡಿಮೆ ಇತ್ತು. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಟೆಂಡರ್ ಪಡೆದು ಕಳಪೆ ಗುಣಮಟ್ಟದ ಸಮವಸ್ತ್ರ ಪೂರೈಕೆ ಮಾಡಿದವರಿಗೆ ಹಣ ಕೊಡದೆ, ಹಾಗೆಯೇ ಇರಿಸಿಕೊಂಡಿದ್ದೇವೆ. ಈ ರೀತಿ ಮತ್ತೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಿದ್ದೇವೆ ಎಂದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎಸ್. ವಿ ಸಂಕನೂರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಸದನಲ್ಲಿ ನಿಯಮ 79ರ ಅಡಿ ಚರ್ಚೆಯಾಗಿದ್ದು, ಪರಿಷತ್ ಸದಸ್ಯರ ಸಭೆಗೆ ನಿರ್ಧರಿಸಲಾಗಿದೆ. ಅದರಂತೆ ಗುರುವಾರ ಸಭೆ ಕರೆದು ಸಭೆಯಲ್ಲಿಯೇ ಸಿ ಅಂಡ್ ಆರ್ ರೂಲ್ ಸೇರಿದಂತೆ ಎಲ್ಲ ಅವಕಾಶಗಳ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

ಪದೋನ್ನತಿ ಕುರಿತು ಸಭೆ: ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಪದೋನ್ನತಿ ನೀಡಲು ಸಿ ಅಂಡ್​ ಆರ್ ನಿಯಮಗಳಲ್ಲಿ ಅವಕಾಶ ಇದ್ದು, 12 ವರ್ಷದಿಂದ ಪದೋನ್ನತಿ ಆಗಿಲ್ಲ. ಈ ಬಗ್ಗೆ ಸಿಎಂ ಗಮನ ಹರಿಸಿದ್ದು, ಗುರುವಾರ ಪರಿಷತ್ ಸದಸ್ಯರ ಸಭೆ ಕರೆಯಲಾಗಿದ್ದು, ಅಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.ಒಂದನೇ ತರಗತಿ ಮಕ್ಕಳಿಗೆ ಸಮವಸ್ತ್ರ ಪೂರೈಕೆಗೆ ಪ್ರತಿ ವಿದ್ಯಾರ್ಥಿಗೆ 100 ರೂ. ಕೊಡಲಾಗುತ್ತಿದೆ. ಇಷ್ಟು ಹಣದಲ್ಲಿ ಕಳಪೆ ಸಮವಸ್ತ್ರವೇ ಪೂರೈಸಲು ಸಾಧ್ಯ ಈ ಹಣ ಹೆಚ್ಚಿಸಿ ಎಂದು ಸದಸ್ಯ ರವಿಕುಮಾರ್ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಮಧುಬಂಗಾರಪ್ಪ, ಇದೆಲ್ಲಾ ಟೆಂಡರ್ ಕರೆದು ಕೊಡುವುಂತಹದ್ದು, ನಾವು ದರ ನಿಗದಿ ಮಾಡಲಾಗಲ್ಲ. ಈಗಾಗಲೇ ಟೆಂಡರ್ ಆಗಿದೆ. ಉತ್ತಮ ಗುಣಮಟ್ಟದ ಸಮವಸ್ತ್ರ ನಮ್ಮ ಸರ್ಕಾರ ಕೊಡಲಿದೆ ಎಂದು ಭರವಸೆ ನೀಡಿದರು.