ಲಾಕ್ ಡೌನ್ ಹಿನ್ನೆಲೆ: 8 ಮಂದಿ ಕುಟುಂಬಿಕರ ಸಮ್ಮುಖ ಸರಳ ವಿವಾಹ!

ಕುಂದಾಪುರ: ಕೊರೋನಾ ಮಹಾಮಾರಿ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‍ಡೌನ್ ಇದ್ದು ಯಾವುದೇ ಶುಭ ಸಮಾರಂಭಗಳಲ್ಲಿ ಕುಟುಂಬಿಕರನ್ನು ಹೊರತು ಹೆಚ್ಚು ಮಂದಿ ಸೇರಬಾರದೆಂಬ ಆದೇಶದ ಹಿನ್ನೆಲೆ ಕುಂದಾಪುರದಲ್ಲಿ ಗುರುವಾರ ಸರಳವಾಗಿ ವಿವಾಹವೊಂದು ನೆರವೇರಿದೆ.

ಅಂಪಾರು ಗುಡಿಬೆಟ್ಟು ನಿವಾಸಿ ಗಿರೀಶ್ ಹಾಗೂ ಅಚ್ಲಾಡಿ ಮೂಲದ ಪ್ರೀತಿಕಾ ವಿವಾಹವು ಸರಳವಾಗಿ ಕುಂದಾಪುರ ತಾಲೂಕಿನ ಹಳ್ನಾಡು ಗಣಪತಿ ದೇವಸ್ಥಾನದಲ್ಲಿ ಜರುಗಿತು.

ಈ ವಿವಾಹದಲ್ಲಿ ವರನ ಕಡೆಯಿಂದ ನಾಲ್ವರು ಹಾಗೂ ವಧುವಿನ ಕಡೆಯಿಂದ ನಾಲ್ವರು ಸೇರಿ ಎಂಟು ಮಂದಿ ಭಾಗಿಯಾಗಿದ್ದಾರೆ.

ಇಂದು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸನ್ನಿಧಿಯ ಶ್ರೀ ಶಿವಪಾರ್ವತಿ ಕೃಪಾ ಸಭಾಭವನದಲ್ಲಿ ನಡೆಯಬೇಕಿದ್ದ ಇವರ ವಿವಾಹವನ್ನು ಲಾಕ್‍ಡೌನ್ ಹಿನ್ನೆಲೆ ಸರಳವಾಗಿ ನಡೆಸಲಾಗಿದೆ. ಅಲ್ಲದೆ ಭಾನುವಾರ ನಡೆಯಬೇಕಾದ ಆರತಕಕ್ಷತೆಯನ್ನು ರದ್ದುಪಡಿಸಲಾಗಿದೆ.