ಡಿ. ದೇವರಾಜ ಅರಸು ಹಿ.ವ.ಅಭಿವೃದ್ಧಿ ನಿಗಮ: ಸಾಲ ಯೋಜನೆ

ಉಡುಪಿ : ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ 2019-20 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಲ್ಲಿ ಸೌಲಭ್ಯ ಪಡೆಯ ಬಯಸುವವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ನಿಗಮದ ಯೋಜನೆಗಳಲ್ಲಿ ಸೌಲಭ್ಯ ಪಡೆಯಲಿಚ್ಛಿಸುವ ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿದವರಾಗಿರಬೇಕು (ವಿಶ್ವಕರ್ಮ ಮತ್ತು ಅದರ ಉಪ ಸಮುದಾಯಗಳು, ಉಪ್ಪಾರ ಮತ್ತು ಅದರ ಉಪ ಸಮುದಾಯಗಳು, ಅಂಬಿಗ ಮತ್ತು ಅದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪ ಸಂಖ್ಯಾತರನ್ನು ಹೊರತುಪಡಿಸಿ). ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 40000 ರೂ. ಮತ್ತು ಪಟ್ಟಣ ಪ್ರದೇಶದವರಿಗೆ 55000 ರೂ. ಒಳಗಿರಬೇಕು. ಅರ್ಜಿದಾರರು 18 ರಿಂದ 55 ವರ್ಷದವರಾಗಿರಬೇಕು. ಕೆ.ವೈ.ಸಿಯ ಬಗ್ಗೆ ಆಧಾರ್ ಕಾರ್ಡ್/ ಚುನಾವಣಾ ಗುರುತಿನ ಚೀಟಿ/ ಪಾನ್ ಕಾರ್ಡ್ ದಾಖಲೆಗಳನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿದಾರರು ಐ.ಎಫ್.ಎಸ್.ಸಿ ಕೋಡ್ ಹೊಂದಿರುವ ರಾಷ್ಟ್ರೀಕೃತ/ ಗ್ರಾಮೀಣ ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿರಬೇಕು.

   ರಾಜ್ಯ ಸರ್ಕಾರದ ಯೋಜನೆಗಳು : ಚೈತನ್ಯ ಸಹಾಯಧನ ಯೋಜನೆ, ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ, ಕಿರುಸಾಲ ಯೋಜನೆಯಲ್ಲಿ ಸೌಲಭ್ಯ, ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸುಬುದಾರರಿಗೆ ಸಾಲ ಮತ್ತು ಸಹಾಯಧನ, ವಿದೇಶಿ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಾಂಗಕ್ಕೆ ಬಡ್ಡಿ ರಹಿತ ಸಾಲ ಯೋಜನೆ, ಗಂಗಾ ಕಲ್ಯಾಣ ( ವೈಯಕ್ತಿಕ ಕೊಳವೆಬಾವಿ  ಮತ್ತು ಸಾಮೂಹಿಕ ನೀರಾವರಿ ಯೋಜನೆ) ನೀರಾವರಿ ಯೋಜನೆ.

      ಮೇಲ್ಕಂಡ ಯೋಜನೆಗಳನ್ನು ಪಡೆಯಲಿಚ್ಛಿಸುವ ಹಿಂದುಳಿದ ವರ್ಗಗಳ ಫಲಾಪೇಕ್ಷಿಗಳು, ಅರ್ಜಿ ನಮೂನೆಗಳನ್ನು ಜುಲೈ 3 ರ ಒಳಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಅಥವಾ ಆಯಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಉಚಿತ ಅರ್ಜಿಗಳನ್ನು ಪಡೆಯಬಹುದಾಗಿದೆ. ಅಲ್ಲದೇ ನಿಗಮದ ವೆಬ್‍ಸೈಟ್  ಮೂಲಕವೂ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ರಜತಾದ್ರಿ, ಉಡುಪಿ, ಇಲ್ಲಿಗೆ ಜುಲೈ 12 ರೊಳಗೆ ಸಲ್ಲಿಸಬೇಕು. ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

   ಹೆಚ್ಚಿನ ಮಾಹಿತಿಗಾಗಿ ನಿಗಮದ  ದೂರವಾಣಿ ಸಂಖ್ಯೆ: 0820-2574882 ಅನ್ನು ಸಂಪರ್ಕಿಸುವಂತೆ ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ ಇವರ ಪ್ರಕಟಣೆ ತಿಳಿಸಿದೆ.