ಉಡುಪಿ: ಇತ್ತೀಚಿನ ದಿನಗಳಲ್ಲಿ ಅಂಗಡಿ-ಮುಂಗಟ್ಟು, ಹೋಟೆಲ್ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು, ಮಾಲೀಕರು ಮತ್ತು ಸಿಬ್ಬಂದಿ ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸದೇ ಇರುವುದು ಕಂಡುಬಂದಿದೆ. ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ತಾತ್ಕಾಲಿಕವಾಗಿ ಅಂಗಡಿ ಪರವಾನಗಿಯನ್ನು ರದ್ದುಪಡಿಸಿ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ಜಿಪಂ ಕಚೇರಿಯಲ್ಲಿ ನಡೆದ ಕೋವಿಡ್ 19 ಸಂಬಂಧಿಸಿದ ಸಭೆಯಲ್ಲಿ ಅವರು ಮಾತನಾಡಿದರು.
ಬಸ್ಸುಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ತಪ್ಪದೇ ಮಾಸ್ಕ್ ಗಳನ್ನು ಧರಿಸುವಂತೆ ಬಸ್ಸಿನ ನಿರ್ವಾಹಕರು ಎಚ್ಚರವಹಿಸಬೇಕು. ಹಾಗೆ ಸಾರ್ವಜನಿಕರು ಓಡಾಡುವ ಬಸ್ಸುಗಳನ್ನು ಪ್ರತೀ ದಿನ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು ಎಂದರು.
ಜಿಲ್ಲೆಯ ಪ್ರತಿಯೊಂದು ದೇವಸ್ಥಾನದಲ್ಲಿ ಹಾಗೂ ಪ್ರೇಕ್ಷಣಿಯ ಸ್ಥಳಗಳಲ್ಲಿ ಬರುವ ಪ್ರವಾಸಿಗರು ಮುಖಗವಸು ಹಾಕದಿದ್ದಲ್ಲಿ ಅವರ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್-19 ತಡೆಗೆ ಸರ್ಕಾರವು ನೀಡಿರುವ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿ ಜನಸಾಮಾನ್ಯರು ಓಡಾಡುತ್ತಿದ್ದರೆ, ಅಂಥವರ ವಿರುದ್ಧ ದಂಡ ಶುಲ್ಕವನ್ನು ವಿಧಿಸಬೇಕೆಂದು ಸೂಚನೆ ನೀಡಿದರು.
ಶಾಲೆಗಳ ಆನ್ಲೈನ್ ತರಗತಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಕೊರೊನಾ ಸೋಂಕು ತಡೆಯ ಮಾರ್ಗಸೂಚಿಯನ್ನು ಬೋಧಿಸಬೇಕು. ಅಲ್ಲದೇ ಪೋಷಕರು ಸೇರಿದಂತೆ ನೆರೆಹೊರೆಯವರಿಗೆ ವಿದ್ಯಾರ್ಥಿಗಳಿಂದ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದು ತಿಳಿಸಿದರು.












