ಕುಂದಾಪುರ:ವಿಶ್ವ ರಂಗಭೂಮಿ ದಿನಾಚರಣೆ

ಕುಂದಾಪುರ: ಮೃಗವಾಗಿದ್ದ ನಮ್ಮ ಪೂರ್ವಜರು ಮಾನವರಾದದ್ದು ಕೇವಲ ಜೈವಿಕ ವಿಕಾಸದಿಂದಷ್ಟೇ ಅಲ್ಲ, ನಾವು ಮನುಷ್ಯ ಎಂದು ಕರೆಯಿಸಿಕೊಳ್ಳಲು ಸಾಧ್ಯವಾದದ್ದೇ ಸಾಂಸ್ಕ್ರತಿಕ ವಿಕಾಸದಿಂದ. ಪ್ರಶ್ನೆಯೇ ನಮ್ಮಲ್ಲಿ ಪ್ರಜ್ಞೆಯನ್ನು ಹುಟ್ಟಿಸಿತು. ಆ ಪ್ರಶ್ನೆಯನ್ನು ಇನ್ನೊಬ್ಬರಿಗೆ ಕೇಳುವಾಗಲೇ ರಂಗಭೂಮಿ ಹುಟ್ಟಿತು ಎಂದು ಸಮುದಾಯ ಸಂಘಟನೆಯ ಅಧ್ಯಕ್ಷ ಉದಯ ಗಾಂವ್ಕರ್ ಹೇಳಿದರು.

ಅವರು ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಬುಧವಾರ ಸಮುದಾಯ ಸಾಂಸ್ಕ್ರತಿಕ ಸಂಘಟನೆ, ಜೇಸಿಐ ಕುಂದಾಪುರ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ಜೆಸಿಐ ಭವನದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ನ್ಯಾಯವಾದಿ ಶ್ರೀಧರ್, ಪ್ರೇಕ್ಷಕರೂ ರಂಗಗೀತೆಗಳನ್ನು ಜೊತೆಗೆ ಹಾಡುವಂತೆ ಉತ್ತೇಜಿಸುವ ಮೂಲಕ ನಟ ಮತ್ತು ಪ್ರೇಕ್ಷಕರ ನಡುವಿನ ಅಂತರವನ್ನು ವಿಲೀನಗೊಳಿಸಿ ಇಡೀ ಸಭಾಂಗಣವನ್ನೇ ರಂಗದ ಮೇಲೆ ತಂದ ಶ್ರೇಯ ವಾಸುದೇವ ಗಂಗೇರ ಅವರಿಗೆ ಸಲ್ಲಬೇಕು ಎಂದರು.

ಹಿರಿಯ ಕಲಾವಿದರಾದ ಜಿ.ವಿ ಕಾರಂತ, ಬಾಲಕೃಷ್ಣ ಎಂ, ಶಂಕರ ಆನಗಳ್ಳಿ, ನರಸಿಂಹ ಎಚ್, ರಂಗ ವಿಮರ್ಶಕ ಶೋಭಾ ಅರಸ್ ಮತ್ತಿತರರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಚಿಂತಕರಾದ ಪಡುಕರೆ ಉದಯ ಶೆಟ್ಟಿ ಕಲಾವಿದರನ್ನು ಅಭಿನಂದಿಸಿದರು.

ಕ್ಯೂಬಾದ ರಂಗಕರ್ಮಿ ಕಾರ್ಲೋಸ್ ಸಾಲ್ಡ್ರನ್‌ರವರ ಸಂದೇಶವನ್ನು ರಂಗ ನಿರ್ದೇಶಕ ಮತ್ತು ಸಮುದಾಯ ಸಂಘಟನೆಯ ಉಪಾಧ್ಯಕ್ಷ ವಾಸುದೇವ ಗಂಗೇರ ಅವರ ನಿರ್ದೇಶನದಲ್ಲಿ ಕಲಾವಿದರುಗಳಾದ ಸುಧಾಕರ ಕಾಂಚನ್, ವಿಕ್ರಮ್, ಅಶೋಕ ತೆಕ್ಕಟ್ಟೆ, ಸಚಿನ್ ಅಂಕೋಲಾ, ಶಿವಾನಂದ ಬೀಜಾಡಿ, ಆಲ್ಡ್ರಿನ್ ಡಿಸೋಜ, ರವೀಂದ್ರ ಕೋಡಿ, ರವಿ ಕಟ್ಕರೆ, ಅನ್ನಪೂರ್ಣ ಸಚಿನ್ ಅವರ ತಂಡವು ರಂಗಗೀತೆಗಳು ಮತ್ತು ರಂಗಚಲನೆ, ಆಂಗಿಕಗಳ ನೆರವಿನಲ್ಲಿ ವಾಚಿಸಿದರು.