ಕುಂದಾಪುರ:ವಿದ್ಯಾರ್ಥಿನಿಯರನ್ನು ತಡೆದ ಪ್ರಾಂಶುಪಾಲರ ನಡೆ ಖಂಡನಾರ್ಹ:ಎಸ್ ಐ ಓ

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 3/02/2022 ರ ಗುರುವಾರದಂದು ಎಂದಿನಂತೆ ಶಿರವಸ್ತ್ರ ಧರಿಸಿ ಬಂದ ವಿದ್ಯಾರ್ಥಿನೀಯರನ್ನು ಕಾಲೇಜಿನ ಕ್ಯಾಂಪಸಿನ ಗೇಟಿನ ಬಳಿಯೇ ತಡೆದು ಅಮಾನವೀಯವಾಗಿ ವರ್ತಿಸಿದ ಪ್ರಾಂಶುಪಾಲರ ವರ್ತನೆ ನಿಜಕ್ಕೂ ಖೇದಕರ. ಈ ಘಟನೆ ಖಂಡನಾರ್ಹ  ಎಂದು ಎಸ್.ಐ.ಓ ಪ್ರಕಟನೆಯಲ್ಲಿ ತಿಳಿಸಿದೆ

ಬಹಳಷ್ಟು ವರ್ಷದಿಂದ ವಿದ್ಯಾರ್ಥಿನೀಯರು ಶಿರವಸ್ತ್ರದೊಂದಿಗೆ ಸರ್ಕಾರಿ ಪದವಿಪೂರ್ವ ಕಾಲೇಜು ಕುಂದಾಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತ ಬಂದಿದ್ದಾರೆ. ಈ ಮುಂಚೆ ಕೂಡ ವಿದ್ಯಾರ್ಥಿನೀಯರು ಸದ್ರಿ ಕಾಲೇಜಿನಲ್ಲಿ ಶಿರವಸ್ತ್ರದೊಂದಿಗೆ ಶಿಕ್ಷಣ ಪಡೆದು ಹೋಗಿದ್ದಾರೆ. ಇದೀಗ ಸಂಘಪರಿವಾರದ ಕುಮ್ಮಕ್ಕಿನಿಂದ ಶಿರವಸ್ತ್ರದ ವಿವಾದ ಸೃಷ್ಟಿಸಲಾಗಿದೆ.. ಈ ವಿವಾದವನ್ನು ಬಗೆಹರಿಸಿ ವಿದ್ಯಾರ್ಥಿನೀಯರಿಗೆ ವಿದ್ಯಾಭ್ಯಾಸ ಮಾಡಲು ಅನುವು ಮಾಡಿಕೊಡಬೇಕಾಗಿದ್ದ ಪ್ರಾಂಶುಪಾಲರು ಸ್ವತಃ ಗೇಟಿನಲ್ಲಿ ವಿದ್ಯಾರ್ಥಿನಿಯರನ್ನು ತಡೆದು ನಿಲ್ಲಿಸಿದ್ದು ಈ ದೇಶದ ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ. ಇದು ವಿದ್ಯಾರ್ಥಿನೀಯರ ಸಂವಿಧಾನ ಬದ್ಧ ಹಕ್ಕಿನ ಮೇಲಿನ ಪ್ರಹಾರದೊಂದಿಗೆ ಶ್ರೈಕ್ಷಣಿಕ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ.

ಇನ್ನು ಪ್ರಾಂಶುಪಾಲರ ಅಮಾನವೀಯ ವರ್ತನೆಯ ಹೊರತಾಗಿಯೂ ಜಿಲ್ಲಾಧಿಕಾರಿ ಮತ್ತು ಸಂಬಂಧ ಪಟ್ಟ ಇಲಾಖೆಯ ಮೌನ ಆತಂಕ ಸೃಷ್ಟಿಸಿದೆ.

ಈ ಕೂಡಲೇ ಸಂಬಂಧಪಟ್ಟ ಇಲಾಖೆಯವರು ಮಧ್ಯಪ್ರವೇಶಿಸಿ ವಿದ್ಯಾರ್ಥಿನೀಯರನ್ನು ಈ ಹಿಂದಿನಂತೆ ಶಿರವಸ್ತ್ರ ಧರಿಸಿ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಲು ಅನುವು ಮಾಡಿಕೊಡಬೇಕೆಂದು ಎಸ್.ಐ.ಓ ಜಿಲ್ಲಾಧ್ಯಕ್ಷರಾದ ಅಫ್ವಾನ್ ಹೂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.