ಕುಂದಾಪುರ:ಟಿಪ್ಪರ್‌ನೊಳಗಿದ್ದ ಕಲ್ಲುಬಂಡೆ ರಸ್ತೆಗೆ: ತಪ್ಪಿತು ಭಾರೀ ದುರಂತ!

ಕುಂದಾಪುರ: ಬೃಹತ್ ಗಾತ್ರದ ಕಲ್ಲುಬಂಡೆಗಳನ್ನು ಹೊತ್ತು ಸಾಗುತ್ತಿದ್ದ ಟಿಪ್ಪರ್‌ನಿಂದ ಕಲ್ಲುಗಳು ರಸ್ತೆ ಮಧ್ಯೆ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ತೊಡಕುಂಟಾದ ಘಟನೆ ಹೆಮ್ಮಾಡಿಯ ಲಕ್ಷ್ಮೀ ಹೊಟೇಲ್ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿ-೬೬ ರಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಇಲ್ಲಿನ ಸಮುದ್ರತೀರದಲ್ಲಿ ಕಡಲ್ಕೊರೆತ ತಡೆಗಾಗಿ ಬಂಡೆಕಲ್ಲುಗಳನ್ನು ಹಾಸುವ ಕಾಮಗಾರಿ ನಡೆಯುತ್ತಿದ್ದು ಕಡಲತೀರಕ್ಕೆ ಬಂಡೆಕಲ್ಲುಗಳನ್ನು ಸಾಗಾಟ ಮಾಡುವ ವೇಳೆಯಲ್ಲಿ ಈ ಅವಘಡ ನಡೆದಿದೆ.

ತಪ್ಪಿದ ಭಾರೀ ಅನಾಹುತ:

ಕಡಲ್ಕೊರೆತ ತಡೆಗಾಗಿ ದೊಡ್ಡ ಟಿಪ್ಪರ್ ವಾಹನಗಳಲ್ಲಿ ಬಂಡೆಕಲ್ಲುಗಳನ್ನು ಸಾಗಿಸುತ್ತಿದ್ದು, ಟಿಪ್ಪರ್ ಹಿಂಬದಿಯ ಲಾಕ್ ತುಂಡಾಗಿದ್ದರಿಂದ ತಾತ್ಕಾಲಿಕವಾಗಿ ಹಗ್ಗವನ್ನು ಕಟ್ಟಿ ಸಾಗಾಟ ಮಾಡಲಾಗುತ್ತಿತ್ತು. ಟಿಪ್ಪರ್ ಒಳಗಡೆ ಬಂಡೆಕಲ್ಲುಗಳನ್ನು ರಾಶಿ ಹಾಕಿದ್ದರಿಂದ ಒತ್ತಡಕ್ಕೆ ಹಗ್ಗ ತುಂಡಾಗಿ ಬಂಡೆಕಲ್ಲುಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಟಿಪ್ಪರ್ ಹಿಂಬದಿ ಸ್ವಿಫ್ಟ್ ಕಾರೊಂದು ಸಾಗುತ್ತಿದ್ದು, ಕಾರು ಚಾಲಕನ ಸಮಯಪ್ರಜ್ಞೆಯಿಂದಾಗಿ ಪವಾಡಸದೃಶ ರೀತಿಯಲ್ಲಿ ಮದುವೆ ಸಮಾರಂಭವೊಂದಕ್ಕೆ ತೆರಳುತ್ತಿದ್ದ ಕುಟುಂಬವೊಂದು ನಿಟ್ಟುಸಿರು ಬಿಟ್ಟಿದೆ. ಸ್ವಿಫ್ಟ್ ಕಾರಿನ ಹಿಂಭಾಗ ಬರುತ್ತಿದ್ದ ಇಂಡಿಕೋ ಕಾರಿನ ಎಡಬದಿಗೆ ಬಂಡೆಕಲ್ಲು ಬಡಿದಿದ್ದರಿಂದ ಕಾರು ಅಲ್ಪಸ್ವಲ್ಪ ಜಖಂಗೊಂಡಿದೆ.

 

.