ಕುಂದಾಪುರ: ಕೋವಿಡ್ ನಿಯಮ ಉಲ್ಲಂಘಿಸಿ ಮೆಹಂದಿ ಕಾರ್ಯಕ್ರಮ ಆಯೋಜನೆ; ಎಂಟು ಮಂದಿಯ ವಿರುದ್ಧ ಕೇಸ್ ದಾಖಲು

ಕುಂದಾಪುರ: ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಮೆಹಂದಿ ಕಾರ್ಯಕ್ರಮ ಆಯೋಜಿಸಿದ ಘಟನೆ‌ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ಅಸೋಡಿ ಎಂಬಲ್ಲಿ ಮೇ 21ರಂದು ಸಂಜೆ ನಡೆದಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಂಟು ಮಂದಿಯ ಪ್ರಕರಣ ದಾಖಲಾಗಿದೆ.

ಕಮ್ರಾಡಿ ನಿವಾಸಿ ಭುಜಂಗ ಶೆಟ್ಟಿ ಎಂಬವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಸುಮಾರು ಏಳು ಮಂದಿ ಮಾಸ್ಕ್ ಧರಿಸದೇ ಸುರಕ್ಷಿತ ಅಂತರ ಕಾಪಾಡದೇ ಕೋವಿಡ್ ನಿಯಮ ಉಲ್ಲಂಘಿಸಿ ಭಾಗವಹಿಸಿದ್ದಾರೆ ಎನ್ನಲಾದ ವೀಡಿಯೊ ವೈರಲ್ ಆಗಿದೆ. ಈ ಆಧಾರದಲ್ಲಿ ಮನೆ ಮಾಲೀಕ ಭುಜಂಗ ಶೆಟ್ಟಿ ಸಹಿತ ಎಂಟು ಮಂದಿಯ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವೀಡಿಯೊ ಆಧಾರದಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ನ ರಾಘವೇಂದ್ರ ವರ್ಣೇಕರ್ ನೀಡಿದ ದೂರಿನಂತೆ ಭುಜಂಗ ಶೆಟ್ಟಿ ಹಾಗೂ ಇತರ ಏಳು ಮಂದಿ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.