ಕುಮಾರಣ್ಣರಿಂದ ಕಾಂಗ್ರೆಸ್‌ಗೆ ಭಿಕ್ಷುಕ ಪಟ್ಟ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಮುಂದಿನ ಲೋಕಸಭೆ ಚುನಾವಣೆಗೆ ಜೆಡಿಎಸ್‌–ಕಾಂಗ್ರೆಸ್‌ ಸೀಟು ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾವು ಭಿಕ್ಷುಕರಲ್ಲ ಎಂದಿದ್ದಾರೆ. ಆದರೆ ಅವರ ಮಾತಿನ ವರಸೆಯನ್ನು ನೋಡಿದರೆ ಪರೋಕ್ಷವಾಗಿ ಕಾಂಗ್ರೆಸ್‌ನ್ನು ಭಿಕ್ಷುಕರೆಂದು ಸಂಭೋದಿಸಿರುವಂತೆ ಕಾಣುತ್ತದೆ. ಸುಮ್ಮನೆ ಕುಮಾರಸ್ವಾಮಿ ಈ ರೀತಿ ಮಾತನಾಡುವವರಲ್ಲ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕುಟುಕಿದರು.
ಉಡುಪಿಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಶಾಸಕ ಆನಂದ ಸಿಂಗ್‌ ಹಾಗೂ ಕಂಪ್ಲಿ ಶಾಸಕ ಗಣೇಶ್‌ ಹೊಡೆದಾಟ ಪ್ರಕರಣ ಅವರ ವೈಯಕ್ತಿಕ ವಿಚಾರ. ಆದ್ದರಿಂದ ಬಿಜೆಪಿ ಇದರ ಬಗ್ಗೆ ಯಾವುದೇ ಟೀಕೆಟಿಪ್ಪಣಿ ಮಾಡಿಲ್ಲ. ಮೈತ್ರಿ ಸರ್ಕಾರಕ್ಕೆ ಕಂಪ್ಲಿ ಗಣೇಶ್‌ ಅವರನ್ನು ಮಂತ್ರಿ ಮಾಡುವ ಯೋಚನೆ ಇದ್ದರೆ, ಅದಕ್ಕೆ ನಾವು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆದರೆ ಆನಂದ್‌ ಸಿಂಗ್‌ ಹಾಗೂ ಗಣೇಶ್‌ ಇಬ್ಬರನ್ನು ಮಂತ್ರಿ ಮಾಡಿದರೆ ಅವರಿಗೆ ಸಮಸ್ಯೆ ಬಗೆಹರಿಸಲು ಸುಲಭವಾಗಬಹುದು ಎಂದು ಲೇವಡಿ ಮಾಡಿದರು.
ಸಿ.ಟಿ ರವಿ ಪರ ಬ್ಯಾಟಿಂಗ್:
ಶಾಸಕ ಸಿ.ಟಿ. ರವಿ ಕಾರು ಅಪಘಾತ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕ ಸಿ.ಟಿ ರವಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ರಾತ್ರಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಮಾರ್ಗ ಮಧ್ಯೆ ಅಪಘಾತ ಆಗಿದೆ. ಅಪಘಾತ ಆದ ಬಳಿಕವೇ ನನಗೆ ಎಚ್ಚರ ಆಗಿದೆ. ನಾನು ಹಿಂದಿನ ಸೀಟಿನಲ್ಲಿ ಮಲಗಿದ್ದೇ ಎಂದು ರವಿ ಅವರೇ ಹೇಳಿದ್ದಾರೆ. ಆದ್ದರಿಂದ ಈ ವಿಚಾರದಲ್ಲಿ ಸಿ.ಟಿ. ರವಿ ನಿರಪರಾಧಿ. ಈ ಬಗ್ಗೆ ಕಾಂಗ್ರೆಸ್‌ ಸೇರಿದಂತೆ ಇತರರು ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಈ ಪ್ರಕರಣವನ್ನು ಮೇಲ್ನೋಟಕ್ಕೆ ಗಮನಿಸಿದರೆ ಸಿ.ಟಿ. ರವಿ ಅವರ ಕಾರು ಹೌದು. ಆದರೆ ಅವರು ಕಾರು ಚಾಲನೆ ಮಾಡುತ್ತಿರಲಿಲ್ಲ. ಕಾಂಗ್ರೆಸ್‌ ಮಾಡುತ್ತಿರುವ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿದೆ. ಅಪಘಾತವನ್ನು ವೈಭವೀಕರಿಸಿ ಒಬ್ಬರನ್ನು ತೇಜೋವಧೆ ಮಾಡುವುದು ಅತ್ಯಂತ ಖಂಡನೀಯ ಎಂದು ಹೇಳಿದರು.
ಕೋಟ ಬಿಜೆಪಿ ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್‌ ಮೇಲೆ ಕೋಟ ಅವಳಿ ಕೊಲೆ
ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಪಕ್ಷ ಅಮಾನತು ಮಾಡಿದೆ. ಈ ಪ್ರಕರಣದ ಪಾರದರ್ಶಕ ತನಿಖೆಗೆ ನಮ್ಮ ಸಂಪೂರ್ಣ ಸಹಕಾರ ಇದೆ. ಈ ವಿಚಾರದಲ್ಲಿ ನಾವು ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದರು.