ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಮಂಗಳೂರು ವಿಭಾಗವು ಮಂಗಳೂರು ಜಂಕ್ಷನ್ (ಪಡೀಲ್) ರೈಲು ನಿಲ್ದಾಣದಿಂದ ವಿವಿಧ ಭಾಗಗಳಿಗೆ ನಗರ ಬಸ್ ಸೇವೆಗಳನ್ನು ಆರಂಭಿಸಿದ್ದು, ರೈಲ್ವೆ ಪ್ರಯಾಣಿಕರು ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದೆ.
ರೈಲು ನಿಲ್ದಾಣದಿಂದ ನಗರದ ವಿವಿಧ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಭಾಗಗಳಿಗೆ ಸುಗಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ಮಂಗಳೂರು-3 ಘಟಕ ಈ ಹೊಸ ಸೇವೆಯನ್ನು ಜಾರಿಗೊಳಿಸಿದೆ.
ಕಟೀಲು ಮಾರ್ಗದ ಬಸ್ ಸೇವೆ
ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಕಟೀಲಿಗೆ ಬೆಳಗ್ಗೆ 6.55 ಹಾಗೂ 10.45 ಗಂಟೆಗೆ ಬಸ್ಗಳು ಹೊರಡಲಿವೆ. ಈ ಬಸ್ಗಳು ಕೂಳೂರು, ಸುರತ್ಕಲ್, ಚೊಕ್ಕಬೆಟ್ಟು, ಕಾಟಿಪಳ್ಳ, ಶಿಬರೂರು ಹಾಗೂ ಬಲವಿನಗುಡ್ಡೆ ಮಾರ್ಗವಾಗಿ ಸಂಚರಿಸಲಿವೆ.
ಬೊಕ್ಕಪಟ್ಣ ಮಾರ್ಗದ ಬಸ್ ಸೇವೆ
ಬೊಕ್ಕಪಟ್ಣಕ್ಕೆ ಬೆಳಗ್ಗೆ 8.45, 10.15, 11.45, ಮಧ್ಯಾಹ್ನ 1.30, 3.20 ಹಾಗೂ ಸಂಜೆ 5.00 ಮತ್ತು 6.30 ಗಂಟೆಗೆ ಬಸ್ಗಳು ಲಭ್ಯವಿರುತ್ತವೆ. ಇವು ಕಂಕನಾಡಿ, ಜ್ಯೋತಿ, ಪಿವಿಎಸ್, ಲಾಲ್ಬಾಗ್, ಸುಲ್ತಾನ್ ಬತ್ತೇರಿ, ಅಮೃತ ವಿದ್ಯಾಲಯ ಹಾಗೂ ಬೋಳಾರ ಮಾರ್ಗವಾಗಿ ಸಂಚರಿಸಲಿವೆ.
ಸ್ಟೇಟ್ ಬ್ಯಾಂಕ್ ಮಾರ್ಗದ ಬಸ್ ಸೇವೆ
ಸ್ಟೇಟ್ ಬ್ಯಾಂಕ್ ಪ್ರದೇಶಕ್ಕೆ ಮಧ್ಯಾಹ್ನ 1.00, 1.25, 2.40, 3.00 ಹಾಗೂ ಸಂಜೆ 5.00 ಗಂಟೆಗೆ ಬಸ್ಗಳು ಕಾರ್ಯನಿರ್ವಹಿಸಲಿವೆ. ಈ ಬಸ್ಗಳು ಪಡೀಲ್, ಮರೋಳಿ, ನಂತೂರು, ಕದ್ರಿ ಹಾಗೂ ಜ್ಯೋತಿ ಮಾರ್ಗವಾಗಿ ಸಂಚರಿಸಲಿವೆ.
ಕೊಡಿಕಲ್ ಮಾರ್ಗದ ಬಸ್ ಸೇವೆ
ಕೊಡಿಕಲ್ಗೆ ಬೆಳಗ್ಗೆ 8.00, 9.00, 9.50, 11.00, ಮಧ್ಯಾಹ್ನ 12.15, 2.30 ಹಾಗೂ 3.30 ಗಂಟೆಗೆ ಬಸ್ಗಳು ಲಭ್ಯವಿರುತ್ತವೆ. ಈ ಬಸ್ಗಳು ಪಡೀಲ್, ಮರೋಳಿ, ಕಂಕನಾಡಿ ಮಾರ್ಕೆಟ್, ಮಲ್ಲಿಕಟ್ಟೆ, ಕೆಪಿಟಿ, ಲಾಲ್ಬಾಗ್, ಉರ್ವ ಸ್ಟೋರ್ ಹಾಗೂ ಕೊಟ್ಟಾರ ಮಾರ್ಗವಾಗಿ ಸಂಚರಿಸಲಿವೆ.
ಈ ಹೊಸ ಸಾರಿಗೆ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

















