ಸ್ವರ್ಣಗೋಪುರ ಉದ್ಘಾಟನೆ: ಕೃಷ್ಣಮಠದಿಂದ ಜೆಡಿಎಸ್ ವರಿಷ್ಠ ದೇವೇಗೌಡ, ಸಿಎಂ ಕುಮಾರಸ್ವಾಮಿಗೆ ಆಹ್ವಾನ

ಉಡುಪಿ: ಕೃಷ್ಣಮಠದ ಸ್ವರ್ಣಗೋಪುರ ಉದ್ಘಾಟನೆ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರಿಗೆ ಪರ್ಯಾಯ ಪಲಿಮಾರು ಮಠದ ವತಿಯಿಂದ ಆಹ್ವಾನ ನೀಡಲಾಗಿದೆ. 
ನಗರದ ಹೊರವಲಯದ ಸಾಯಿರಾಧ ರೆಸಾರ್ಟಿನಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದು, ಅವರು ಕಳೆದ ನಾಲ್ಕು ದಿನಗಳಿಂದ ವಿವಿಧ ಬಗೆಯ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ. 
ಸ್ವರ್ಣಗೋಪುರ ಉದ್ಘಾಟನೆಯ ಪ್ರಯುಕ್ತ ಜೂನ್ ಮೊದಲ ವಾರದಿಂದ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ  ಜೆಡಿಎಸ್ ವರಿಷ್ಠರನ್ನು ಮತ್ತು ಮುಖ್ಯಮಂತ್ರಿಗಳನ್ನು ಪರ್ಯಾಯ ಪಲಿಮಾರು ಮಠದ ಶ್ರೀಗಳು ಆಹ್ವಾನಿಸಿದ್ದಾರೆ. ಅಲ್ಲದೆ, ಇಂದು ಅವರು ಚಿಕಿತ್ಸೆ ಪಡೆಯುತ್ತಿರುವ ರೆಸಾರ್ಟ್ ಗೆ ಕೃಷ್ಣಮಠದಿಂದ ಆಮಂತ್ರಣ ಪತ್ರವನ್ನು ಕಳುಹಿಸಿಕೊಡಲಾಗಿದೆ.
ಕೃಷ್ಣಮಠಕ್ಕೆ ಅಕ್ಷಯ ತೃತೀಯದ ದಿನವಾದ ಮೇ 7ರಂದು ಬರುವುದಾಗಿ ದೇವೇಗೌಡ್ರು ಹೇಳಿದ್ದು, ಅಲ್ಲಿಯೇ ಪ್ರಸಾದ ಸ್ವೀಕರಿಸುವುದಾಗಿ ಮಠದ ಅಧಿಕಾರಿಗಳಿಗೆ ಹೇಳಿದ್ದಾರೆ. ಕೃಷ್ಣ ಮಠದ ಗರ್ಭಗುಡಿಯ ಮೇಲ್ಛಾವಣಿಗೆ ಸುವರ್ಣ ಕವಚ ಹೊದಿಸುವ ಕೆಲಸಕ್ಕೆ ಮಾರ್ಚ್ 13ರಂದು ಚಾಲನೆ ನೀಡಲಾಗಿತ್ತು. ಜೂನ್ ಮೊದಲ ವಾರದಲ್ಲಿ ಗೋಪುರದ ಕೆಲಸ ಸಂಪೂರ್ಣಗೊಳ್ಳಲಿದೆ.