ಉಡುಪಿ: ಕೃಷ್ಣಜನ್ಮಾಷ್ಟಮಿ, ವಿಟ್ಲಪಿಂಡಿ ಉತ್ಸವಕ್ಕೆ ಸಾರ್ವಜನಿಕರು ಭಾಗವಹಿಸುವಂತಿಲ್ಲ: ಡಿಸಿ ಜಗದೀಶ್

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಿರುವುದರಿಂದ ಕೃಷ್ಣಮಠದಲ್ಲಿ ಸೆ. 10 ಮತ್ತು 11ರಂದು ನಡೆಯುವ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವದಲ್ಲಿ ಸಾರ್ವಜನಿಕರು ಭಾಗವಹಿಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಕೋವಿಡ್ 19 ಸಂಬಂಧಿಸಿ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಹೊಸ ಮಾರ್ಗಸೂಚಿಯಲ್ಲಿ ಸೆ. 21ರ ಬಳಿಕ 100 ಜನರು ಸೇರಿ ಕಾರ್ಯಕ್ರಮ ನಡೆಸಬಹುದು ಎಂದು ಆದೇಶಿಸಿದೆ. ಆದರೆ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವ ಸೆ. 10 ಹಾಗೂ 11ರಂದು ನಡೆಯುವುದರಿಂದ ಹಳೆಯ ಮಾರ್ಗಸೂಚಿಯೇ ಅನ್ವಯಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೃಷ್ಣಜನ್ಮಾಷ್ಟಮಿ ಮಠದೊಳಗೆ ಸಾಂಪ್ರದಾಯಿಕವಾಗಿ ನಡೆಯಲಿದೆ. ರಥಬೀದಿಯಲ್ಲಿ ನಡೆಯುವ ವಿಟ್ಲಪಿಂಡಿ ಉತ್ಸವದಲ್ಲೂ ಮಠದವರು ಮಾತ್ರ ಮೊಸರು ಕುಡಿಕೆಗಳನ್ನು ಒಡೆಯುತ್ತಾರೆ. ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ ರಥಬೀದಿ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ ಎಂದು ಹೇಳಿದ್ದಾರೆ.

ವೇಷ ಹಾಕಲು ಅನುಮತಿ ಇಲ್ಲ:
ವಿಟ್ಲಪಿಂಡಿ ಉತ್ಸವದ ಪ್ರಯುಕ್ತ ಯಾರೂ ಕೂಡ ವೇಷಗಳನ್ನು ಧರಿಸುವಂತಿಲ್ಲ ಎಂದು ಡಿಸಿ ತಿಳಿಸಿದ್ದಾರೆ.