ಸುರತ್ಕಲ್ ಟೋಲ್ ಗೇಟ್ ವಿರುದ್ದದ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ

ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ ಜನತೆಯನ್ನು ಸುಲಿಗೆ ಮಾಡಿ ಹಗಲು ದರೋಡೆ ಮಾಡುತ್ತಿದೆ. ಈ ಟೋಲ್ ಗೇಟ್ ಅನಧಿಕೃತವೆಂದು ಸರಕಾರವೇ ಒಪ್ಪಿಕೊಂಡಿದ್ದರೂ, ಇನ್ನೂ ತೆರವು ಮಾಡದಿರುವುದು ಜಿಲ್ಲೆಯ ಜನತೆಗೆ ಬಗೆದ ದ್ರೋಹ. ಕಾರ್ಕಳದ ಜನರೂ ಇದರಿಂದ ಸಂತ್ರಸ್ತರಾಗಿದ್ದಾರೆ. ಆದ್ದರಿಂದ ಅಕ್ರಮವಾಗಿ ಸುಲಿಗೆ ಮಾಡುತ್ತಿರುವ ಸುರತ್ಕಲ್ ಟೋಲ್ ಗೇಟ್ ಕೂಡಲೇ ಬಂದ್ ಆಗಬೇಕು. ಟೋಲ್ ನ ವಿರುದ್ಧ ನಡೆಯುವ ಯಾವುದೇ ಹೋರಾಟಕ್ಕೂ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕೆ.ಪಿ.ಸಿ.ಸಿ ಸದಸ್ಯ ಸುರೇಂದ್ರ ಶೆಟ್ಟಿ ಹೇಳಿದರು.

ಅವರು ಶನಿವಾರದಂದು ಸುರತ್ಕಲ್ ಟೋಲ್ ಗೇಟ್ ವಿರುದ್ಧವಾಗಿ ನಡೆಯುತ್ತಿರುವ ಹಗಲು- ರಾತ್ರಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ಪುರಸಭಾ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ಶುಭದರಾವ್ ಮಾತನಾಡಿ, ಸಂಸದ ನಳಿನ್ ಕುಮಾರ್ ಕಟೀಲ್ ನೀಡಿರುವ ಗಡುವು ನಾಳೆಗೆ ಮುಕ್ತಾಯವಾಗಲಿದೆ. ಉಸ್ತುವಾರಿ ಸಚಿವ ಸುನೀಲ್ ಕುಮಾರ್ ನೀಡಿರುವ ಗಡುವು ನವೆಂಬರ್ ಅಂತ್ಯಕ್ಕೆ ಮುಕ್ತಾಯವಾಗುತ್ತದೆ. ಈ ಅವಧಿಯಲ್ಲೂ ಟೋಲ್ ತೆರವು ಸಾಧ್ಯವಾಗದಿದ್ದರೆ ಇಬ್ಬರ ಮಾತಿಗೆ ಬೆಲೆ ಇಲ್ಲದಂತಾಗುವುದಿಲ್ಲವೇ? ಆಗ ಸಾರ್ವಜನಿಕರಿಗೆ ಯಾವ ಮುಖ ತೋರಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಟೋಲ್ ಹೋರಾಟ ಸಮಿತಿಯ ಪ್ರಮುಖ ಮುನೀರ್ ಕಾಟಿಪಳ್ಳ, ಕಾಂಗ್ರೆಸ್ ನಾಯಕಿ ಲಾವಣ್ಯ ಬಲ್ಲಾಳ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಮಾಳ ಪಂಚಾಯತ್ ಮಾಜಿ ಅಧ್ಯಕ್ಷ ಅಜಿತ್ ಹೆಗ್ಡೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ, ನಗರ ಮಹಿಳಾ ಅಧ್ಯಕ್ಷೆ ಕಾಂತಿ ಶೆಟ್ಟಿ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುಹಾಸ್ ಕಾವ, ಸುನೀಲ್ ಭಂಡಾರಿ ,‌ ಪ್ರಥ್ವಿರಾಜ್, ರಮಾಕಾಂತ್ ಶೆಟ್ಟಿ, ನಿಶಾನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.