ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಕೆ.ಪಿ.ಆಚಾರ್ಯ ವಿಧಿವಶ

ಕಾಪು: ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಸ್ಥಾಪಕರಾದ ಕೆ. ಪಿ. ಆಚಾರ್ಯ (78) ಅವರು ಇಂದು (ಫೆ.16) ಮುಂಜಾನೆ ನಿಧನ ಹೊಂದಿದರು.

ಕೆ. ಪಿ. ಆಚಾರ್ಯ ಅವರು 30 ವರ್ಷಗಳ ಹಿಂದೆ ಅನಂತರಾಜ ಚಾರಿಟೇಬಲ್ ಟ್ರಸ್ಟ್ ನ ಮೂಲಕವಾಗಿ ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಅನ್ನು ಸ್ಥಾಪಿಸಿದ್ದರು. ಕಾಪು ತಾಲೂಕಿನಲ್ಲಿ ಐಸಿಐಸಿಐ ಶಿಕ್ಷಣ ವ್ಯವಸ್ಥೆಯ ಪ್ರಥಮ ವಿದ್ಯಾಸಂಸ್ಥೆಯಾಗಿ ಸ್ಥಾಪನೆಗೊಂಡಿದ್ದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಸಹಸ್ರಾರು ಮಂದಿ ವಿದ್ಯಾರ್ಥಿಗಳಿಗೆ ಬೆಳಕಾಗಿತ್ತು. ಶೇಕಡ 80ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರಾಗಿದ್ದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸುವ ಮೂಲಕ ಎಲ್ಲರ ಪ್ರೀತಿಯ ಅಜ್ಜ ಎಂದೇ ಅವರು ಹೆಸರುವಾಸಿಯಾಗಿದ್ದರು.

ಕಾಪು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕೊಪ್ಪಲಂಗಡಿ ಶ್ರೀ ವಾಸುದೇವ ಸ್ವಾಮಿ ದೇವಸ್ಥಾನ, ಕಲ್ಯಾ ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನ, ಶ್ರೀ ಕಲ್ಕುಡ ದೈವಸ್ಥಾನ ಹೀಗೆ ಕಾಪು ಸಾವಿರ ಸೀಮೆಯ ಎಲ್ಲಾ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಪ್ರಧಾನ ಮಾರ್ಗದರ್ಶಕರಾಗಿದ್ದ ಅವರು ಸಮಾಜ ಸೇವೆಯಲ್ಲಿಯೂ ತನ್ನ ಛಾಪನ್ನು ಮೂಡಿಸಿದ್ದರು.

ಕಾಪುವಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳು, ರಾಜ್ಯ ಮಟ್ಟದ ಪ್ರತಿಭಾ ಸ್ಪರ್ಧೆ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರಲು ನಿರಂತರವಾಗಿ ಶ್ರಮಿಸಿದ್ದರು. ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಸಹ ಸಂಚಾಲಕಿ ಶ್ವೇತಾ ಆಚಾರ್ಯ ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕೆ. ಪಿ. ಆಚಾರ್ಯ ಅವರ ನಿಧನಕ್ಕೆ ಸಮಾಜದ ನೂರಾರು ಮಂದಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಮೃತ ದೇಹವನ್ನು ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗೆ ತರಲಾಗಿದ್ದು, ಸಂಜೆ 2 ಗಂಟೆಯವರೆಗೆ ಶಾಲೆಯಲ್ಲಿ ಇರಿಸಲಾಗುವುದು. ಸಂಜೆ 4 ಗಂಟೆಗೆ ಉಡುಪಿ ಬೀಡಿನ ಗುಡ್ಡೆಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.