ಕೇರಳ: ಮಾಜಿ ಕ್ರಿಕೆಟಿಗ ಆತ್ಮಹತ್ಯೆಗೆ ಶರಣು

ಅಲಪ್ಪುಳ: ಕೇರಳದ ಮಾಜಿ ಕ್ರಿಕೆಟಿಗ ಎಂ.ಸುರೇಶ್‌ ಕುಮಾರ್‌ (47) ಶುಕ್ರವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುರೇಶ್‌ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಇರುವುದನ್ನು ಮೊದಲು ನೋಡಿದ್ದು ಅವರ ಮಗ. ರಾತ್ರಿ 7.15ರ ಸುಮಾರಿಗೆ ಅವರು ನಮಗೆ ಈ ವಿಷಯವನ್ನು ತಿಳಿಸಿದರು. ಇದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಕುರಿತು ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಡಗೈ ಸ್ಪಿನ್ನರ್‌ ಆಗಿದ್ದ ಸುರೇಶ್‌ ಅವರು ಭಾರತ ತಂಡದ ಪರ ಆಡಿದ್ದ ಕೇರಳದ ಮೊದಲ ಕ್ರಿಕೆಟಿಗ ಎಂಬ ಹಿರಿಮೆ ಹೊಂದಿದ್ದರು. 1990ರಲ್ಲಿ ನಡೆದಿದ್ದ 19 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ನ್ಯೂಜಿಲೆಂಡ್‌ ಎದುರಿನ ಪಂದ್ಯದಲ್ಲಿ ಆಡುವ ಮೂಲಕ ಈ ಸಾಧನೆ ಮಾಡಿದ್ದರು. ಆಗ ಕರ್ನಾಟಕದ ರಾಹುಲ್‌ ದ್ರಾವಿಡ್‌ ಅವರು ಭಾರತ ತಂಡದ ನಾಯಕರಾಗಿದ್ದರು.

1995–96ರ ರಣಜಿ ಟ್ರೋಫಿ ಋತುವಿನಲ್ಲಿ ಕೇರಳ ತಂಡವನ್ನು ಪ್ರತಿನಿಧಿಸಿದ್ದ ಸುರೇಶ್‌, ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ‘ಹ್ಯಾಟ್ರಿಕ್‌’ ವಿಕೆಟ್‌ ಸಾಧನೆ ಮಾಡಿದ್ದರು. 1994–95ನೇ ಋತುವಿನ ಟೂರ್ನಿಯ ತಮಿಳುನಾಡು ಎದುರಿನ ಹಣಾಹಣಿಯಲ್ಲಿ 12 ವಿಕೆಟ್‌ ಉರುಳಿಸಿ ಕೇರಳ ತಂಡದ ಗೆಲುವಿನ ರೂವಾರಿಯಾಗಿದ್ದರು.

1991–92ರಿಂದ 2005–06ರ ಅವಧಿಯಲ್ಲಿ ಒಟ್ಟು 72 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದ ಸುರೇಶ್‌, 1,657ರನ್‌ ದಾಖಲಿಸಿದ್ದರು. 196 ವಿಕೆಟ್‌ಗಳನ್ನೂ ಉರುಳಿಸಿದ್ದರು.