ಕತ್ತಿಯಿಂದ ತನ್ನನ್ನು ತಾನು ಕಡಿದುಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದ ವಿಚಿತ್ರ

ಕುಂದಾಪುರ: ವ್ಯಕ್ತಿಯೋರ್ವ ಕತ್ತಿಯಿಂದ ತನ್ನನ್ನು ತಾನು ಕಡಿದುಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದ ವಿಚಿತ್ರ ಹಾಗೂ ಕಳವಳಕಾರಿ ಘಟನೆಯೊಂದು ಕುಂದಾಪುರದಲ್ಲಿ ಭಾನುವಾರ ನಡೆದಿದೆ.

ಕತ್ತಿಯಿಂದ ಕಡಿದುಕೊಂಡ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗಾ ನಿವಾಸಿ ಮುದಿಯಪ್ಪ(35) ಎಂದು ಗುರುತಿಸಲಾಗಿದೆ.

ಭಾನುವಾರ ಮಧ್ಯಾಹ್ನದ ಸುಮಾರಿಗೆ ಕುಂದಾಪುರದ ಹೊಸ ಬಸ್ ಸ್ಟ್ಯಾಂಡ್‍ನಲ್ಲಿ ಕೂತು ಕತ್ತಿಯಿಂದ ತನ್ನ ವೃಷಣ ಭಾಗವನ್ನು ಕುಯ್ದುಕೊಳ್ಳುತ್ತಿರುವಾಗ ಸಾರ್ವಜನಿಕರು ನೋಡಿ ಕತ್ತಿಯನ್ನು ಕಸಿದುಕೊಳ್ಳಲು ಯತ್ನಿಸಿದ್ದರು. ಕೂಡಲೇ ಆತ ಕತ್ತಿಯನ್ನು ಬೀಸುತ್ತಲೇ ತನ್ನ ಕುತ್ತಿಗೆ ಭಾಗವನ್ನು ಕಡಿಕೊಳ್ಳುತ್ತಾ ರಾಮಮಂದಿರ ರಸ್ತೆ ಮಾರ್ಗವಾಗಿ ಓಡಲು ಯತ್ನಿಸಿದನು. ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಬೆನ್ನಟ್ಟಿದ್ದರು. ಕೊನೆಗೂ ಹರಸಾಹಸಪಟ್ಟು ಸಾರ್ವಜನಿಕರ ಸಹಾಯ ಪಡೆದು ಪೊಲೀಸರು ಆತನನ್ನು ಹಿಡಿಯುವಲ್ಲಿ ಯಶಸ್ವಿಯಾದರು.

ಎಎಸ್‍ಐ ಪಾಂಡುರಂಗ ನಾಯ್ಕ್, ಸುಧಾಕರ್ ಹಾಗೂ ಸಿಬ್ಬಂದಿಗಳು ವ್ಯಕ್ತಿಯನ್ನು ಕರೆದೊಯ್ದು ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ. ಮುದಿಯಪ್ಪನ ಕುಟುಂಬಿಕರನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದು ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ತಿಳಿಸಿದ್ದಾರೆ.

ಮುದಿಯಪ್ಪ ವೃಷಣ ಹಾಗೂ ಕುತ್ತಿಗೆ ಭಾಗವನ್ನು ಕತ್ತಿಯಿಂದ ಕುಯ್ದುಕೊಂಡು ಕತ್ತಿ ಬೀಸುತ್ತಾ ರಸ್ತೆಯಲ್ಲಿ ಓಡಾಡುತ್ತಿರುವ ಮತ್ತು ಸಾರ್ವಜನಿಕರು ಆತನನ್ನು ಸೆರೆ ಹಿಡಿಯುವಲ್ಲಿ ಶ್ರಮಿಸುತ್ತಿರುವ ವಿಡಿಯೋ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈಲರ್ ಆಗುತ್ತಿದೆ.