ಕಟಪಾಡಿ:ಶಿಕ್ಷಕನು ಸಮಾಜಕ್ಕೆ ಪರಿಚಿತನಾಗಬೇಕು, ಬದುಕು ರೂಪಿಸುವ ಶಿಕ್ಷಣ ಮಕ್ಕಳಿಗೆ ದೊರಕಬೇಕು, ಅಧ್ಯಾಪನ ವೃತ್ತಿಗೆ ಗೌರವ ಹೆಚ್ಚಾಗಬೇಕು, ಅಂಕಗಳಿಗಿಂತ ವ್ಯಕ್ತಿತ್ವ ವಿಕಸನವು ಮುಖ್ಯವಾಗಬೇಕು, ಸಮಾಜ ಬದಲಾಗುವುದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅಖಿಲ ಭಾರತೀಯ ರಾಷ್ಟ್ರೀಯ ಶಿಕ್ಷಕ ಮಹಾಸಂಘದ ರಾಷ್ಟ್ರೀಯ ಸಂಚಾಲಕರಾಗಿರುವ ಡಾಕ್ಟರ್ ರಘು ಅಕಮಂಚಿ ಹೇಳಿದರು.
ಅವರು ಇತ್ತೀಚಿಗೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಉಡುಪಿ ಜಿಲ್ಲೆ ಮತ್ತು ತ್ರಿಶಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆದಂತಹ ಗುರುವಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕ ಸಂಘದ ಸಹಕಾರ್ಯದರ್ಶಿ ಡಾ. ಮಾಧವ ಎಂಕೆ ಮಾತನಾಡಿ ಪಠ್ಯಪುಸ್ತಕಗಳು ರಾಷ್ಟ್ರಪ್ರೇಮ ಹೆಚ್ಚಿಸುವ ಮಾರ್ಗಗಳಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್ ಮಾತನಾಡಿ ಶಿಕ್ಷಕನ ಕಲಿಯುವಿಕೆ ನಿರಂತರವಾಗಿದ್ದಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಡಾ. ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳ ಶಿಕ್ಷಕ ವೃಂದ ಶಿಕ್ಷಕೇತರ ಬಂಧುಗಳು, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ ನಿರೂಪಿಸಿದರು.

















