ಕರ್ಣ ಕುಂಡಲಧಾರಿಣಿ ಕಾದಂಬರಿ ಬಿಡುಗಡೆ

ಕಾರ್ಕಳ: ಉಪನ್ಯಾಸಕ ಪರಮ್ ಭಾರಧ್ವಜ್ ಅವರ ಚೊಚ್ಚಲ ಕೃತಿ ಕರ್ಣ ಕುಂಡಲಧಾರಿಣಿ ಕಾದಂಬರಿಯನ್ನು ಕಾರ್ಕಳ ರಾಮಸಮುದ್ರದ ದಡದಲ್ಲಿ ಜೆ.ಸಿ ತರಬೇತುದಾರ, ಲೇಖಕ ರಾಜೇಂದ್ರ ಭಟ್ ಕೆ. ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಅವರು, ಓದುವ ಮತ್ತು ಬರೆಹಗಾರರ ಸಂಖ್ಯೆ ಕಡಿಮೆಯಾಗಿಲ್ಲ. ಮಾಧ್ಯಮ ಬದಲಾಗಿದೆಯಷ್ಟೆ. ಸಾಮಾಜಿಕ ಜಾಲತಾಣಗಳು ಅತ್ಯಂತ ವೇಗದಲ್ಲಿ ಸಮಾಜವನ್ನಾವರಿಸಿದೆ. ಜಾಗತಿಕ ವೇದಿಕೆಯಾಗಿರುವ ಆಧುನಿಕ ಮಾಧ್ಯಮಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕರ್ಣ ಕುಂಡಲಧಾರಿಣಿ ಈಗಿನ ಯುವಕ ಯುವತಿಯರ ಮನಃಸ್ಥಿತಿಗೆ ಕನ್ನಡಿಯಂತಿದೆ. ವ್ಯಕ್ತಿಯೋರ್ವ ತನ್ನ ಮನಸ್ಸನ್ನು, ತನ್ನ ಸುತ್ತಲಿನ ಪರಿಸರವನ್ನು ಗ್ರಹಿಸಿ ಅಕ್ಷರ ರೂಪ ಕೊಡುವ ಆನಂದದ ಕೆಲಸವನ್ನು ಪರಮ್ ಭಾರಧ್ವಜ್ ಯಶಸ್ವಿಯಾಗಿ ಸಾಧಿಸಿದ್ದಾರೆ ಎಂದರು.

ಕಾರ್ಕಳ ಮಂಜುನಾಥ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕ ಆರ್. ವಿವೇಕಾನಂದ ಶೆಣೈ, ಚಲನಚಿತ್ರ ನಿರ್ದೇಶಕ ಸುಧೀರ್ ಶಾನುಭೋಗ್, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಗೋಪೀನಾಥ ಶೆಣೈ, ರಾಘವೇಂದ್ರ ಮಠದ ಕಾರ್ಯಕರ್ತ ರಾಘವೇಂದ್ರ, ಸಾಣೂರು ನರಸಿಂಹ ಕಾಮತ್, ಕಾಂಜರಕಟ್ಟೆ ದೀಪಕ್ ಕಾಮತ್ ಉಪಸ್ಥಿತರಿದ್ದರು. ಲೇಖಕ ಪರಮ್ ಕಾರ್ಯಕ್ರಮ ನಿರೂಪಿಸಿದರು.