ಕಾರ್ಕಳ: ಸುದೀಪ್ ಶೆಟ್ಟಿ ಆತ್ಮಹತ್ಯೆಗೆ ಪತ್ನಿಯ ಪ್ರಚೋದನೆ ಕಾರಣ- ತನಿಖೆಯಲ್ಲಿ ಸಾಬೀತು!

ಉಡುಪಿ: ಸುದೀಪ್ ಶೆಟ್ಟಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು,ಆತ್ಮಹತ್ಯೆಗೆ ಆತನ ಪತ್ನಿ, ನಟಿ ಸೌಮ್ಯ ಶೆಟ್ಟಿ ದುಷ್ಪೇರಣೆ ನೀಡಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ಬೆಳ್ತಂಗಡಿ ತಾಲ್ಲೂಕಿನ ನೆಲ್ಯಾಡಿ ನಿವಾಸಿ ಸುದೀಪ್ ಶೆಟ್ಟಿ ಹಾಗೂ ಕಾರ್ಕಳದ ಬಂಗ್ಲೆಗುಡ್ಡೆಯ ಸೌಮ್ಯ ಶೆಟ್ಟಿ ಅವರು ಫೆಬ್ರುವರಿ 17ರಂದು ಪುತ್ತೂರಿನಲ್ಲಿ ನೋಂದಾಯಿತ ವಿವಾಹವಾಗಿದ್ದು, ಬಳಿಕ ಮಾರ್ಚ್ 19ರಂದು ಕುಕ್ಕುಂದೂರು ದೇವಸ್ಥಾನದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ಮದುವೆಯಾಗಿದ್ದರು.

ಮದುವೆಯಾದ ಕೆಲವೇ ದಿನಗಳಲ್ಲಿ, ಮಾರ್ಚ್ 22ರಂದು ಸುದೀಪ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಮೃತಪಟ್ಟಿದ್ದರು.

ಈ ಘಟನೆ ಕರಾವಳಿ ಭಾಗದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಸುದೀಪ್ ಅವರ ತಂದೆ ದಾಮೋದರ್ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದೂರಿನಲ್ಲಿ ಸೌಮ್ಯ ಶೆಟ್ಟಿ ಮಾನಸಿಕ ಕಿರುಕುಳ ನೀಡಿ ತನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದಾಳೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ವಿಷ ಸೇವಿಸಿದ ವಿಚಾರವನ್ನು ಹಲವು ದಿನಗಳ ಕಾಲ ಮುಚ್ಚಿಟ್ಟು ಸರಿಯಾದ ಚಿಕಿತ್ಸೆ ದೊರಕದಂತೆ ಮಾಡಿದ್ದಾಳೆ ಎಂಬ ಆರೋಪವನ್ನೂ ಅವರು ಮಾಡಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಏಪ್ರಿಲ್ 11ರಂದು ಸೌಮ್ಯ ಶೆಟ್ಟಿಯನ್ನು ಉಡುಪಿಯಲ್ಲಿ ವಶಕ್ಕೆ ಪಡೆದಿದ್ದರು. ಬಳಿಕ ಆಕೆಗೆ ಉಡುಪಿ ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು, ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು.

ದೂರುದಾರ ದಾಮೋದರ್ ಅವರ ಪ್ರಕಾರ, ಮಾರ್ಚ್ 17ರಂದು ಸಂಬಂಧಿಕರ ಮನೆ ಪೂಜಾ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸೌಮ್ಯ ಮತ್ತು ಸುದೀಪ್ ನಡುವೆ ಜಗಳ ನಡೆದಿದ್ದು, ಕುಟುಂಬದ ಸದಸ್ಯರೊಂದಿಗೆ ಸಹ ಆಕೆ ಅಸಭ್ಯವಾಗಿ ವರ್ತಿಸಿದ್ದಾಳೆ.

ಈ ಘಟನೆಗಳ ನಂತರ ಸುದೀಪ್ ಮಾನಸಿಕವಾಗಿ ನೊಂದಿದ್ದರು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಪೂರ್ಣಗೊಳಿಸಿರುವ ಕಾರ್ಕಳ ನಗರ ಪೊಲೀಸರು ಜೂನ್ 9ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಮುಂದಿನ ನ್ಯಾಯಾಂಗ ಪ್ರಕ್ರಿಯೆ ನಡೆಯಬೇಕಿದೆ.