ಕಾರ್ಕಳ: ಭುವನೇಂದ್ರ ಕಾಲೇಜಿನಲ್ಲಿ ಎನ್ನೆಸೆಸ್ ಉದ್ಘಾಟನೆ

ಕಾರ್ಕಳ: ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ಎನ್ನೆಸೆಸ್, ವಿದ್ಯಾರ್ಥಿಗಳಿಗೆ ಕಲಿಸುತ್ತದೆ. ಜೀವನದಲ್ಲಿ ಆದರ್ಶಗಳನ್ನು ಪಾಲಿಸಬೇಕು. ಯಾವುದೇ ಕೆಲಸಗಳನ್ನು ಮಾಡುವ ಮೊದಲು ಅದರಿಂದಾಗುವ ಒಳಿತಿನ ಬಗ್ಗೆ ತಿಳಿದಿರಬೇಕು ಮತ್ತು ಅದರ ಬಗ್ಗೆ ಯೋಚಿಸಬೇಕು. ಖಚಿತವಾದ ಗುರಿಯನ್ನು ಹೊಂದಿರದೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಕೊಕ್ರಾಡಿ ಸರಕಾರಿ ಕಾಲೇಜಿನ ಪ್ರಾಚಾರ್‍ಯ ರೋಬರ್ಟ್ ಮಾರ್ಟಿಸ್ ಹೇಳಿದರು.

ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ಪ್ರಸ್ತುತ ವರ್ಷದ ಎನ್‌ಎಸ್‌ಎಸ್ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜೀವನದ ಗುರಿಯನ್ನು ಮುಟ್ಟಲು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಕಲಿತ ಪಾಠಗಳು ಸಹಾಯ ಮಾಡುತ್ತದೆ. ತಾನು ಬೆಳೆದು ಇತರರನ್ನು ಬೆಳೆಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ಎನ್ನೆಸೆಸ್ ಪ್ರಬಲ ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸುತ್ತದೆ. ರ್‍ಯಾಂಕ್ ಪಡೆದು ಗುರುತಿಸಿಕೊಳ್ಳುವುದಕ್ಕಿಂತ ಎನ್ ಎಸ್ ಎಸ್ ಸ್ವಯಂಸೇವಕರಾಗಿ ಗುರುತಿಸಿಕೊಳ್ಳುವುದು ಜೀವನ ಪಾಠವನ್ನು ಕಲಿಸಿಕೊಡುತ್ತದೆ  ಎಂದರು.

ಕಾರ್ಯಕ್ರಮದಲ್ಲಿ ಎನ್ನೆಸೆಸ್ ಅಧಿಕಾರಿಗಳಾದ ಶಿವಶಂಕರ್, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಸಚಿನ್, ಅಕ್ಷತಾ ಕುಲಾಲ್, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ಎನ್ನೆಸೆಸ್ ಅಧಿಕಾರಿ ಸುಚಿತ್ರಾ ಪ್ರಸ್ತಾವಿಸಿದರು. ವಿದ್ಯಾರ್ಥಿನಿ ಪ್ರತೀಕ್ಷಾ ಸ್ವಾಗತಿಸಿ, ಅಕ್ಷತಾ ನಿರೂಪಿಸಿ, ಪ್ರತೀಕ್ಷಾ ವಂದಿಸಿದರು.