ಕಾರ್ಕಳ: 4 ಪ್ಲೇಟ್ ತಿಂಡಿ ತಿಂದು ಹಣ ಕೊಡದೆ ಕ್ಯಾಂಟೀನ್ ಮಾಲಕಿಗೆ ಹಲ್ಲೆ ನಡೆಸಿದ ಖದೀಮ

ಕಾರ್ಕಳ: ನಾಲ್ಕು ಪ್ಲೇಟ್ ತಿಂಡಿ ತಿಂದು ಹಣ ಕೊಡದೆ ಕ್ಯಾಂಟೀನ್ ಮಾಲಕಿಗೆ ಜೀವ ಬೆದರಿಕೆಯೊಡ್ಡಿರುವ ಘಟನೆ ಮಿಯ್ಯಾರು ಕಂಬಳ ನಡೆಯುವ ಸ್ಥಳದಲ್ಲಿ ನಡೆದಿದೆ.

ಮಿಯ್ಯಾರು ಮಂಗಲಪಾದೆಯ ಅಶ್ವಿನಿ ಎಂಬವರು ಮಿನಿ ಕ್ಯಾಂಟಿನ್‌ ನಡೆಸುತ್ತಿದ್ದು, ಫೆ. 27ರಂದು ಮಿಯ್ಯೂರು ಕಂಬಳದಲ್ಲಿ ಕ್ಯಾಂಟೀನ್ ಹಾಕಿದ್ದರು. ರಾತ್ರಿ 12.30ಕ್ಕೆ ಆನೆಕೆರೆಯ ಕಾಳು ಎಂಬಾತನು ಬಂದು ನಾಲ್ಕು ಪ್ಲೇಟ್ ತಿಂಡಿ ತೆಗೆದುಕೊಂಡಿದ್ದನು.

ಬಿಲ್ ಕೇಳಿದಾಗ ಹಣ ಕೊಡುವುದಿಲ್ಲ ಎಂದಿದ್ದಾನೆ. ಜೋರು ಮಾಡಿ ಕೇಳಿದಾಗ ಹಲ್ಲೆ ಮಾಡಿದ್ದಾನೆ. ಕಾಲಿಗೆ ಕಲ್ಲು ಎತ್ತಿಹಾಕಿ, ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಅಶ್ವಿನಿ ಮಾ. 2ರಂದು ದೂರು ನೀಡಿದ್ದಾರೆ. ಅದರಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.