ಕಾರ್ಕಳ: ಆಟೊಗೆ ಕಾರು ಡಿಕ್ಕಿ; ಗಂಭೀರವಾಗಿ ಗಾಯಗೊಂಡಿದ್ದ ಆಟೊ ಚಾಲಕ ಸಾವು

ಕಾರ್ಕಳ: ಇಲ್ಲಿನ ಮಿಯಾರು ಚರ್ಚ್ ಬಳಿ ಇಂದು ಬೆಳಿಗ್ಗೆ ಆಟೊ ರಿಕ್ಷಾ ಹಾಗೂ ಕಾರು ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಟೊ ಚಾಲಕ ಮೃತಪಟ್ಟಿದ್ದು, ಆಟೊದಲ್ಲಿದ್ದ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತ ಆಟೊ ಚಾಲಕನನ್ನು 54 ವರ್ಷದ ಚಂದ್ರಶೇಖರ ಮಡಿವಾಳ ಎಂದು ಗುರುತಿಸಲಾಗಿದೆ. ಆಟೊದಲ್ಲಿದ್ದ ಪ್ರಯಾಣಿಕ ದಿವಾಕರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಂದ್ರಶೇಖರ್ ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದರು.

ಮಿಯಾರು ಚರ್ಚ್ ಬಳಿಯಿಂದ ಸ್ವಲ್ಪ ಮುಂದಕ್ಕೆ ತಲುಪಿದಾಗ ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ತೀರ್ಥೇಶ್ ಎಂಬಾತ ಹುಂಡೈ ಗ್ರಾಂಡ್ ಐ-10 ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಟೊಗೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಆಟೊ ಮಗುಚಿಬಿದ್ದಿದೆ. ರಸ್ತೆಗೆ ಎಸೆಯಲ್ಪಟ್ಟ ಚಂದ್ರಶೇಖರ್ ಅವರು ಗಂಭೀರ ಗಾಯಗೊಂಡಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲಿ ಅವರು ಮೃತಪಟ್ಟಿದ್ದಾರೆ. ಅಪಘಾತದಿಂದ ರಿಕ್ಷಾ ಜಖಂಗೊಂಡಿದ್ದು, ಕಾರಿಗೂ ಹಾನಿಯಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.