ಪ್ರಧಾನಿ ಮೋದಿ ಭೇಟಿ ಮಾಡಿದ ಕನ್ನಡ ಚಿತ್ರರಂಗದ ಕಲಾವಿದರು

ಬೆಂಗಳೂರು: ಕನ್ನಡ ಚಿತ್ರರಂಗದ ದಿಗ್ಗಜ ನಟರಾದ ಯಶ್, ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು, ಬ್ಲಾಗರ್ ಅಯ್ಯೋ ಶ್ರದ್ಧಾ ಮತ್ತು ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.

ಬೆಂಗಳೂರಿನ ಇಂಡಿಯಾ ಪವಿಲಿಯನ್ ನಲ್ಲಿ ಏರೋ ಶೋನಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು ಈ ಸಂದರ್ಭ ಭೇಟಿ ನಡೆದಿದೆ.

ಪ್ರಧಾನಿ ಮೋದಿಯವರನ್ನು ಭೇಟಿಯಾದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಯಶ್, ಮೋದಿಯವರ ಬಳಿ ಚಿತ್ರೋದ್ಯಮದ ಬಗ್ಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ. ಸರಕಾರದಿಂದ ಉದ್ಯಮವು ಬಯಸುತ್ತಿರುವ ನಿರೀಕ್ಷೆಗಳು ಮತ್ತು ದೇಶದ ಅಭಿವೃದ್ದಿಯಲ್ಲಿ ಉದ್ಯಮವು ನೀಡಬಹುದಾದ ಕೊಡುಗೆಗಳ ಬಗ್ಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದ ಅವರು ಮೋದಿಯವರು ಅತ್ಯಂತ ಸೂಕ್ಷ್ಮ ವಿಷಯದ ಬಗ್ಗೆ ಹೊಂದಿರುವ ಅಪಾರ ಜ್ಞಾನದ ಬಗ್ಗೆ ವಿಸ್ಮಿತರಾಗಿರುವುದಾಗಿ ತಿಳಿಸಿದ್ದಾರೆ. ಪ್ರಧಾನಿಯವರು ಉದ್ಯಮದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಯಾವುದೇ ಸಹಾಯ ಬೇಕಾದಲ್ಲಿ ಸರಕಾರ ಬಳಿ ಬರುವಂತೆ ಹೇಳಿದ್ದಾರೆ ಎಂದು ಯಶ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬಹುಚರ್ಚಿತ ಕಲಾವಿದೆ ಅಯ್ಯೋ ಶೃದ್ಧಾ ಕೂಡಾ ಮೋದಿಯವರನ್ನು ಭೇಟಿಯಾಗಿರುವ ಬಗ್ಗೆ ತಮ್ಮ ಸಂತೋಷವನ್ನು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಮೋದಿ ತಮ್ಮನ್ನು ಭೇಟಿಯಾದ ಕೂಡಲೆ ಅವರ ಪ್ರಥಮ ಪ್ರತಿಕ್ರಿಯೆ ‘ಅಯ್ಯೋ’ ಎಂದಾಗಿತ್ತು ಎಂದು ಅವರು ಹೇಳಿದ್ದಾರೆ.

ಕ್ರಿಕೆಟ್ ರಂಗದ ಪ್ರಖ್ಯಾತ ಆಟಗಾರರಾದ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಮತ್ತು ವೆಂಕಟೇಶ್ ಪ್ರಸಾದ್ ಕೂಡಾ ಮೋದಿಯವರನ್ನು ಭೇಟಿ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.