ಕನಕದಾಸರ ರಚನೆಗಳು ಸಹಬಾಳ್ವೆಯ ಸಂದೇಶ ಸಾರುವ ದಾರಿದೀಪಗಳು: ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್

ಉಡುಪಿ: ಕನಕದಾಸರು ರಚಿಸಿರುವ ಕೃತಿಗಳು ಮತ್ತು ಅವರು ನೀಡಿರುವ ಸಂದೇಶಗಳು ಮಾನವ ಸಮಾಜದಲ್ಲಿ ಸಮಾನತೆ ಮೂಡಲು ಮತ್ತು ಸಹಬಾಳ್ವೆಯಿಂದ ಬಾಳಲು ಅಗತ್ಯವಿರುವ ಸಂದೇಶವನ್ನು ಸಾರುತ್ತವೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು.

ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಸಹಯೋಗದಲ್ಲಿ ನಡೆದ ಭಕ್ತ ಕನಕದಾಸ ಮತ್ತು ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವುದೇ ಜಾತಿ, ಮತ, ಪಂಥ ಹಾಗೂ ಮೇಲು ಕೀಳುಗಳ ಭೇದವಿಲ್ಲದೇ ಜಗತ್ತಿನ ಎಲ್ಲಾ ವ್ಯಕ್ತಿಗಳು ಸಮಾನರು ಎಂಬುದನ್ನು ತಮ್ಮ ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕೀರ್ತನೆಗಳ ಮೂಲಕ ಹಾಗೂ ಕಾವ್ಯಗಳಲ್ಲಿನ ಸಂದೇಶದ ಮೂಲಕ ತಿಳಿಸಿರುವ ಕನಕದಾಸರು ದೇವರು ಯಾವಾಗಲೂ ಬಡವರ ಪರ ಎಂಬುದನ್ನು ರಾಮ ಧ್ಯಾನ ಚರಿತೆ ಮೂಲಕ ತಿಳಿಸಿದ್ದಾರೆ. ವ್ಯಕ್ತಿಯು ತನ್ನ ಗುರಿ ತಲುಪುವುದು ಮುಖ್ಯವಲ್ಲ , ಅದನ್ನು ತಲುಪಲು ಬಳಸುವ ದಾರಿ ಉತ್ತಮವಾಗಿರಬೇಕಿರುತ್ತದೆ. ಅಂತಹ ಉತ್ತಮ ದಾರಿಯಲ್ಲಿ ನಡೆಯಲು ಕನಕದಾಸರ ಸಂದೇಶಗಳು ದಾರಿದೀಪವಾಗುತ್ತವೆ ಎಂದ ಅವರು, ಉಡುಪಿಗೂ ಕನಕದಾಸರಿಗೂ ಅವಿನಾಭಾವ ಸಂಬಂಧವಿದ್ದು, ಶ್ರೀಕೃಷ್ಣನಡೆಗೆ ಅವರಿಗಿದ್ದ ಭಕ್ತಿಯ ಸೆಳೆತ ಮತ್ತು ಶ್ರೀ ಕೃಷ್ಣ ಮಠದ ಕನಕನ ಕಿಂಡಿಯ ಮಹತ್ವ ಎಲ್ಲರಿಗೂ ತಿಳಿದಿದೆ ಎಂದರು.

ಸ್ತ್ರೀ ಶಕ್ತಿಯ ಪ್ರತೀಕವಾಗಿರುವ ಒನಕೆ ಓಬವ್ವ, ಸ್ತ್ರೀ ಧರ್ಮ ಕಾಪಾಡಿಕೊಂಡು ಮಾತೃತ್ವ ಭಾವನೆಯಿಂದ ತಮ್ಮ ಕೋಟೆಯನ್ನು ರಕ್ಷಿಸಿದ ಇತಿಹಾಸವು ಮಹಿಳೆಯರಲ್ಲಿರುವ ತಾಳ್ಮೆ, ಧೈರ್ಯ, ಶೌರ್ಯ ಮತ್ತು ಶಕ್ತಿಯನ್ನು ಜಗತ್ತಿಗೆ ಸಾರಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಕನಕದಾಸ ಮತ್ತು ಒನಕೆ ಓಬವ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಮಾತನಾಡಿ, ಕವಿ, ದಾರ್ಶನಿಕ, ತತ್ವಜ್ಞಾನಿ, ಭಕ್ತಿ ಸಂತರಾಗಿದ್ದ ಕನಕದಾಸರು ತಮ್ಮ ಮುಂಡಿಗೆಗಳು, ಕೀರ್ತನೆಗಳು, ಕಾವ್ಯಗಳ ಮೂಲಕ ಮನುಕುಲಕ್ಕೆ ನೀಡಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ ಅವರು ಮನಸ್ಸಿನ ದಾಸನಾಗದೇ ಸ್ಥಿತಪ್ರಜ್ಞರಾಗಿ ಹರಿಯ ದಾಸನಾಗಬೇಕು ಎಂದಿದ್ದರು. ತಳ ಸಮುದಾಯದಲ್ಲಿ ಹುಟ್ಟಿ ಅವರು ಮಾಡಿದ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಶಿವಕುಮಾರ್, ಹಾಲುಮತ ಮಹಾಸಭಾ (ರಿ), ರಾಜ್ಯ ಸಮಿತಿಯ ಸಂಘಟನಾ ಕಾರ್ಯದರ್ಶಿ ಹನುಮಂತ ಜಿ ಗೋಡೆ, ಉಡುಪಿ ಮತ್ತು ದ.ಕನ್ನಡ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕಂತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ ಸ್ವಾಗತಿಸಿ ವಂದಿಸಿದರು.