ವಿನಾಯಕ ಹೆಗಡೆ ಕಲಗದ್ದೆಗೆ ಅರೆಹೊಳೆ ಗಣಪಯ್ಯ ಸ್ಮಾರಕ ಪ್ರಶಸ್ತಿ

ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಅವರ ತಂದೆ, ಅರೆಹೊಳೆ ಗಣಪಯ್ಯ ಅವರ ಸ್ಮರಣಾರ್ಥ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಸಾಧಕರಿಗೆ ನೀಡುವ ವಾರ್ಷಿಕ ಪ್ರಶಸ್ತಿ, ‘ಅರೆಹೊಳೆ ಗಣಪಯ್ಯ ಸ್ಮಾರಕ ಪ್ರಶಸ್ತಿ’ ಯ 2022 ನೇ ಸಾಲಿನ ಪ್ರಶಸ್ತಿಗೆ ಉತ್ತರ ಕನ್ನಡ‌ಜಿಲ್ಲೆಯ ಸಿದ್ಧಾಪುರ ಸಮೀಪದ ಕಲಗದ್ದೆಯ ವಿನಾಯಕ ಹೆಗಡೆಯವರನ್ನು ಆಯ್ಕೆ ಮಾಡಲಾಗಿದೆ.

ಯಕ್ಷಗಾನ ಕಲಾವಿದರಾಗಿ, ಕಲಗದ್ದೆಯಲ್ಲಿ ಯಕ್ಷನಾಟ್ಯ ವಿನಾಯಕ ದೇವಸ್ಥಾನವನ್ನು ಸ್ಥಾಪಿಸಿ, ನಿರಂತರ ಕಲಾ ಸೇವೆಯನ್ನು ಮಾಡುತ್ತಿರುವ ಇವರು, ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನದ ಮೂಲಕ ಪ್ರದರ್ಶನಗಳನ್ನೂ ನೀಡುತ್ತಿದ್ದಾರೆ. ಏಕವ್ಯಕ್ತಿಯಾಗಿ, ಕಲಗದ್ದೆಯನ್ನು ರಾಜ್ಯಾದ್ಯಂತ ಪ್ರೇಕ್ಷಣೀಯ ಪುಣ್ಯಕ್ಷೇತ್ರವನ್ನಾಗಿ ಮಾರ್ಪಡಿಸಿದ್ದಾರೆ.

ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, ಫಲಕ ಹಾಗೂ ಗೌರವ ಧನವನ್ನೊಳಗೊಂಡಿದ್ದು, ಮೇ.15 ರಂದು ಅರೆಹೊಳೆಯಲ್ಲಿ ನಡೆಯಲಿರುವ ಪ್ರಥಮ ವರ್ಷದ ಗಣಪಯ್ಯ ಸಂಸ್ಮರಣೆಯಂದು ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನಿಸಲಾಗುತ್ತಿದ್ದು,  ಗಣಪಯ್ಯನವರ ಕುಟುಂಬವು ಈ ಪ್ರಶಸ್ತಿಯನ್ನು ಇನ್ನು ವರ್ಷಂಪ್ರತಿ ನೀಡಲಿದೆ ಎಂದು ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ತಿಳಿಸಿದ್ದಾರೆ.