ಎಡನೀರು ಮಠಕ್ಕೆ ಉತ್ತರಾಧಿಕಾರಿಯಾಗಿ ಜಯರಾಮ ಮಂಜತ್ತಾಯ ನೇಮಕ

ಕಾಸರಗೋಡು: ಎಡನೀರು ಮಠಾಧೀಶ ಕೇಶವಾನಂದ ಭಾರತೀತೀರ್ಥ ಮಹಾಸ್ವಾಮಿಗಳು ಶನಿವಾರ ರಾತ್ರಿ ಪರಂಧಾಮ ಸೇರಿದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಮಠದ ಉತ್ತರಾಧಿಕಾರಿಯಾಗಿ ಜಯರಾಮ ಮಂಜತ್ತಾಯ ಅವರನ್ನು ನೇಮಿಸಲಾಗಿದೆ .

ಕಳೆದ ಅನೇಕ ವರ್ಷಗಳಿಂದ ಜಯರಾಮಣ್ಣ ಎಂದೇ ಮಠದ ಭಕ್ತ ವಲಯದಲ್ಲಿ ಚಿರಪರಿಚಿತರಾಗಿದ್ದ ಮಂಜತ್ತಾಯರು ಶ್ರೀಗಳ ಆಪ್ತಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಭಾನುವಾರ ಕೇಶವಾನಂದ ಭಾರತೀತೀರ್ಥರ ಸಮಾಧಿ ಪ್ರಕ್ರಿಯೆ ಮುಗಿಯುವ ಮೊದಲೇ ಜಯರಾಮ ಮಂಜತ್ತಾಯರನ್ನು ಉತ್ತರಾಧಿಕಾರಿಯಾಗಿ ನೇಮಿಸಿ ಸಚ್ಚಿದಾನಂದ ಭಾರತೀತೀರ್ಥ ಮಹಾಸ್ವಾಮಿಗಳೆಂದು ನಾಮಕರಣ ಮಾಡಲಾಗಿದೆ.

ಮಠದ ಆಸ್ಥಾನ ಪುರೋಹಿತರು , ಕುಂಟಾರು ರವೀಶ ತಂತ್ರಿ ಹಿರಣ್ಯ ವೆಂಕಟೇಶ ಭಟ್ ರಮೇಶ ಜೋಯಿಸ ಮೊದಲಾದ ವಿದ್ವಾಂಸರ ಸಮ್ಮುಖದಲ್ಲಿ ಈ ನೇಮಕ ನಡೆದಿದೆ.