ಜ.26 ರಿಂದ ಐಕಳ ಕಾಂತಾಬಾರೆ– ಬೂದಾಬಾರೆ ಕಂಬಳ್ಳೋತ್ಸವ

ಕಿನ್ನಿಗೋಳಿ: ಐಕಳಬಾವ ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬಳೋತ್ಸವ ಶನಿವಾರ ಬೆಳಿಗ್ಗೆ 11ಕ್ಕೆ ಐಕಳ ಮಂಜೊಟ್ಟಿ ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಅಂತರರಾಷ್ಟ್ರೀಯ ವಾಸ್ತು ಜೋತಿಷಿ ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಲಿದ್ದು, ₹20 ಲಕ್ಷ ಅನುದಾನದ ಪ್ರೇಕ್ಷಕ ಗ್ಯಾಲರಿಗೆ ಸಂಸದ ನಳಿನ್‌ಕುಮಾರ್ ಕಟೀಲ್‌ ಭೂಮಿಪೂಜೆ ನೆರವೇರಿಸುವರು. ಕಂಬಳ ಕರೆಗಳನ್ನು ಯುಪಿಸಿಎಲ್‌ ಅದಾನಿ ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ಉದ್ಘಾಟಿಸುವರು. ಐಕಳ ಬಾವ ಯಜಮಾನರಾದ ದೋಗಣ್ಣ ಸಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು. ಜನಪ್ರತಿನಿಧಿಗಳ ಸಹಿತ ಇತರ ಗಣ್ಯರು ಪಾಲ್ಗೊಳ್ಳುವರು.

ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ವಿಧಾನ ಪರಿಷತ್ತಿನ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ, ಸಚಿವರಾದ ಯು.ಟಿ. ಖಾದರ್, ಸಂಸದ ನಳಿನ್‌ ಕುಮಾರ್‌ ಕಟೀಲು, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಶಾಸಕ ಉಮಾನಾಥ ಕೋಟ್ಯಾನ್‌ ಮತ್ತಿತರರು ಭಾಗವಹಿಸಲಿದ್ದಾರೆ.

ಸಮ್ಮಾನ:

ಸಾಧಕರಾದ ಎಂ.ಎನ್‌. ರಾಜೇಂದ್ರಕುಮಾರ್, ಕಿಶೋರ್ ಆಳ್ವ, ಮಣಿಪಾಲ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಬಿ.ಎಂ. ಹೆಗ್ಡೆ ಮತ್ತು ಸಾಯಿರಾಧ ಗ್ರೂಪ್ ಆಫ್ ಕಂಪನೀಸ್‌ನ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು.

ಕಾರ್ಯಾಧ್ಯಕ್ಷ ಚಿತ್ತರಂಜನ್‌ ಭಂಡಾರಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಪುರಂದರ ಶೆಟ್ಟಿ ಉಪಸ್ಥಿತರಿದ್ದರು.