ಜಲ್ ಜೀವನ್ ಮಿಷನ್: ಜಿಲ್ಲೆಯಿಂದ 415 ಕೋಟಿ ರೂ. ಪ್ರಸ್ತಾವನೆ

ಉಡುಪಿ ಮೇ 18: ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಡಿ , ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿ ಮನೆಗೆ ಶುದ್ದ ಕುಡಿಯುವ ನೀರು ಒಗದಿಸಲು ರೂ.415 ಕೋಟಿ ರೂ ಗಳ  ಕ್ರಿಯ ಯೋಜನೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು , ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಜಲ  ಜೀವನ್ ಮಿಷನ್ ಯೋಜನೆಯಡಿ 2024 ರೊಳಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೆ  ವರ್ಷದ 365 ದಿನವೂ, ದಿನಕ್ಕೆ 55 ಲೀ ಶುದ್ದ ಕುಡಿಯುವ ನೀರು ಒಗದಿಸುವ ಯೋಜನೆ ಇದಾಗಿದ್ದು, ಜಿಲ್ಲೆಯಲ್ಲಿ ಈ ಯೋಜನೆಗಾಗಿ  415 ಕೋಟಿ ರೂ. ಗಳ ಅಂದಾಜು ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆ ರಾಜ್ಯದಿಂದ ಕೇಂದ್ರ ಸರ್ಕಾರದ  ಸಲ್ಲಿಕೆಯಾಗಿ, ಅನುಮೋದನೆ ದೊರೆಯಲಿದೆ ಎಂದು ತಿಳಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಗ್ರಾಮೀಣ ಪ್ರದೇಶದ ಯಾವುದೇ ಮನೆಗಳು ಈ ಯೋಜನೆಯಿಂದ ವಂಚಿತರಾಗದಂತೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು.

ಕ್ರಿಯಾಯೋಜನೆಯಲ್ಲಿ ಉಡುಪಿ ತಾಲೂಕಿನ 101 ಗ್ರಾಮಗಳ 100800 ಮನೆಗಳಿಗೆ 108.86 ಕೋಟಿ ರೂ, ಕುಂದಾಪುರ ತಾಲೂಕಿನ 50 ಗ್ರಾಮಗಳ 58161 ಮನೆಗಳಿಗೆ 109.44 ಕೋಟಿ ರೂ ಹಾಗೂ ಕಾರ್ಕಳ ತಾಲೂಕಿನ 99 ಗ್ರಾಮಗಳ 88000 ಮನೆಗಳಿಗೆ 196.76 ಕೋಟಿ ರೂ ಗಳ ಕ್ರಿಯಾ  ಯೋಜನೆ ರೂಪಿಸಲಾಗಿದ್ದು, ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ, ಶಾಲೆ, ಅಸ್ಪತ್ರೆಗಳಿಗೂ ಸಹ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್ ತಿಳಿಸಿದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ರಾಜ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.