ಆರನೇ ತರಗತಿಯ ಪಾಠದಲ್ಲಿ ಹಿಂದೂ ಧರ್ಮಕ್ಕೆ ಅವಮಾನ: ಪಾಠ ಕೈಬಿಡುವಂತೆ ಶಿಕ್ಷಣ ಸಚಿವರ ಆದೇಶ

ಉಡುಪಿ: ಹಿಂದೂ ಧಾರ್ಮಿಕ ನಂಬಿಕೆಗೆ ಘಾಸಿಯಾಗುವ ಅಂಶಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆರನೇ ತರಗತಿಯ ಸಾಮಾಜಶಾಸ್ತ್ರ ಪಾಠವನ್ನು ಕೈ ಬಿಡುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಆದೇಶಿಸಿದ್ದಾರೆ.

ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಅಂಶಗಳ ಬಗ್ಗೆ ಉಡುಪಿಯ ಅದಮಾರು ಮಠದ ಪರ್ಯಾಯ ಈಶಪ್ರಿಯತೀರ್ಥ ಸ್ವಾಮೀಜಿ ಆಡಿಯೋ ಮೂಲಕ ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು.

ವಿವಾದಕ್ಕೆ ಕಾರಣ ಆಗಿದ್ದೇನು: ಕೈ ಬಿಟ್ಟ ಪಾಠದಲ್ಲಿ ಉತ್ತರ ವೇದ ಕಾಲದಲ್ಲಿ ವೈದಿಕ ಆಚರಣೆಗಳಾದ ಯಾಗ-ಯಜ್ಞಗಳ ಹೆಸರಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು. ಇದರಿಂದ ಆಹಾರದ ಉತ್ಪಾದನೆ ಕುಂಠಿತವಾಯ್ತು. ಯಾಗಗಳಿಗೆ ಆಹಾರ ಧಾನ್ಯ- ಹಾಲು- ತುಪ್ಪಗಳನ್ನು ಹಾಕಿದ ಪರಿಣಾಮ ಆಹಾರದ ಅಭಾವವೂ ಉಂಟಾಯ್ತು. ಯಾಗ ಯಜ್ಞಗಳಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿತ್ತು. ಸಂಸ್ಕೃತವೆಂಬ ಪುರೋಹಿತ ಭಾಷೆಯಲ್ಲಿ ಈ ಆಚರಣೆಗಳು ನಡೆಯುತ್ತಿದ್ದು ಜನ ಸಾಮಾನ್ಯರಿಗೆ ಇದು ಅರ್ಥವಾಗುತ್ತಿರಲಿಲ್ಲ.

ಸರಳ ಮಾರ್ಗಗಳ ಮೂಲಕ ಮುಕ್ತಿ ಹೊಂದಲು ಹೊಸ ಧರ್ಮವನ್ನು ಜನ ಅಪೇಕ್ಷಿಸುತ್ತಿದ್ದರು ಎಂದು ಈ ಪಠ್ಯದಲ್ಲಿ ಹೇಳಲಾಗಿದೆ.

ಅದಮಾರು ಶ್ರೀಗಳು, ಈ ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಯಾಗಳಿಗೆ ಮಹತ್ವ ಇತ್ತಾದರೂ, ಅದಕ್ಕೂ ಒಂದು ನಿಯಮ ಇತಿಮಿತಿಗಳಿತ್ತು. ಈ ಕುರಿತು ಭಾಗವತದಲ್ಲಿ ಉಲ್ಲೇಖವಿದೆ. ಎಲ್ಲಾ ಸಾಧಕರಿಗೂ ಯಾಗದಿಂದಲೇ ಮುಕ್ತಿ ಎಂಬ ಅಭಿಪ್ರಾಯ ಇರಲಿಲ್ಲ. 5 ಸಾವಿರ ವರ್ಷಗಳ ಹಿಂದೆ ಬಂದ ಭಾಗವತದಲ್ಲಿಯೇ ಹೀಗೆ ಹೇಳಲಾಗಿದೆ. ಹಾಗಾಗಿ ಪಠ್ಯದಲ್ಲಿರುವ ಮಾತು ಸರಿಯಲ್ಲ ಎಂದು ಆಡಿಯೋದಲ್ಲಿ ತಿಳಿಸಿದ್ದರು.

ಇದೀಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆ ಪಠ್ಯವನ್ನೇ ಕೈ ಬಿಡೋದಾಗಿ ಹೇಳಿದ್ದಾರೆ. ಇದು ಪುಸ್ತಕ ಈ ವರ್ಷ ಪ್ರಕಟವಾಗಿದ್ದಲ್ಲ, ಆದರೂ ಈ ವರ್ಷ ಈ ಪಾಠವನ್ನು ಮಾಡದಿರುವಂತೆ ಆದೇಶ ಮಾಡುತ್ತೇನೆ. ಮುಂದಿನ ವರ್ಷ ಪಠ್ಯ ಪುಸ್ತಕ ಪ್ರಕಟವಾಗುವಾಗ ಈ ಪಾಠ ತೆಗೆಸುತ್ತೇನೆ ಎಂದು ಭರವಸೆ ನೀಡಿದ್ದಾರೆ.